ನೆಲಮಂಗಲ ಬಳಿ ಹಾವಳಿ ಇಟ್ಟಿದ್ದ ಚಿರತೆ ಬೋನಿಗೆ
ದಾಬಸ್ ಪೇಟೆ: ಅರಣ್ಯ ಇಲಾಖೆ ಸತತ ಒಂದು ವಾರದಿಂದ ನಡೆಸಿದ ಕಾರ್ಯಾಚರಣೆಯಿಂದ ಕರಿಯಮ್ಮ ಅವರನ್ನು ಕೊಂದಿದ್ದ ಚಿರತೆ ಸೆರೆ ಸಿಕ್ಕಿದೆ.
ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಇಟ್ಟಿದ್ದ 'ತುಮಕೂರು ಬೋನಿ'ಗೆ ಚಿರತೆ ಬಿದ್ದಿದೆ. ಸೋಮವಾರ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆಯಲ್ಲಿ ಬೋನನ್ನು ಗಮನಿಸಿದಾಗ ಚಿರತೆ ಸೆರೆಯಾಗಿರುವುದು ಗೊತ್ತಾಗಿದೆ.
ನ.18ರಂದು ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಡದ ತಪ್ಪಲಲ್ಲಿರುವ ಕಂಬಾಳು ಗೊಲ್ಲರಹಟ್ಟಿಯ ಕರಿಯಮ್ಮ ಅವರನ್ನು ಸಂಜೆ 5ರ ಸಮಯದಲ್ಲಿ ಚಿರತೆ ಕೊಂದು ಎಳೆದುಕೊಂಡು ಹೋಗಿತ್ತು.
ಇದರಿಂದ ಗ್ರಾಮದ ಜನರು ಭಯಗೊಂಡಿದ್ದರು. ಚಿರತೆ ಹಿಡಿಯಲು ಅರಣ್ಯ ಇಲಾಖೆಯು ಒಂಬತ್ತು ಬೋನುಗಳನ್ನು ಇಟ್ಟಿತ್ತು.
ನ. 24ರ ಸಂಜೆ 5 ಗಂಟೆ ವೇಳೆ ಕರಿಯಮ್ಮನನ್ನು ಕೊಂದ ಸ್ಥಳದ 100 ಮೀಟರ್ ದೂರದಲ್ಲಿ ಚಿರತೆ ಬಂಡೆ ಮೇಲೆ ಕಾಣಿಸಿಕೊಂಡಿತ್ತು. ಇದು ಜನರನ್ನು ಇನ್ನಷ್ಟು ಭಯಕ್ಕೆ ದೂಡಿತ್ತು.
ಸೆರೆ ಸಿಕ್ಕಿರುವ ಚಿರತೆಯು ಸುಮಾರು ಮೂರು ವರ್ಷದ್ದಾಗಿದೆ. ಆಹಾರ ಅರಸಿ ಬಂದ ಚಿರತೆ ಬೋನಿಗೆ ಬಿದ್ದಿದೆ.
ಅರಣ್ಯ ಇಲಾಖೆಯ 40-50 ಸಿಬ್ಬಂದಿ ಒಂದು ವಾರದಿಂದ ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದ್ದರು.
ಶಿವಗಂಗೆ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಇನ್ನೂ ಚಿರತೆಗಳಿವೆ ಇರುವ ಆತಂಕ ಜನರದ್ದಾಗಿದೆ.
ಈಗ ಸೆರೆ ಸಿಕ್ಕಿರುವ ಚಿರತೆ ಕರಿಯಮ್ಮ ಅವರನ್ನು ಕೊಂದ ಚಿರತೆಯೇ ಅಥವಾ ಬೇರೆಯದೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ.
ಚಿರತೆಯ ಜೊಲ್ಲು (ಸಲೈವಾ) ಉಗುರಿನಲ್ಲಿನ ಮಾಂಸದ ತುಣುಕು ಹಾಗೂ ಅಂಟಿಕೊಂಡಿರುವ ರಕ್ತದ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಮೇಲೆ ಅದು ಕರಿಯಮ್ಮ ಅವರನ್ನು ಕೊಂದ ಚಿರತೆಯೋ ಅಲ್ಲವೋ ಎಂಬುದು ತಿಳಿಯುತ್ತದೆ-ಸರೀನಾ ಸಿಕ್ಕಲಿಗಾರ್ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ
ಸೆರೆಯಾಗಿರುವ ಚಿರತೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಕಳುಹಿಸಲಾಗಿದೆ. ಎಫ್ಎಸ್ಎಲ್ ವರದಿ ಬರುವ ತನಕ ಅರಣ್ಯ ಇಲಾಖೆಯ ಕಾರ್ಯಾಚರಣೆ ಮುಂದುವರೆಯಲಿದೆ.-ಮಂಜುನಾಥ್ ಉಪ ವಲಯ ಅರಣ್ಯಾಧಿಕಾರಿ ನೆಲಮಂಗಲ ತಾಲ್ಲೂಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.