ದಾಬಸ್ ಪೇಟೆ: ಸೋಂಪುರ ಹೋಬಳಿಯ ನರಸೀಪುರ ತೋಪಿನಲ್ಲಿ ಇರುವ ಶ್ರೀ ಆತ್ಮರಾಮ ದೇವಾಲಯದ ಬ್ರಹ್ಮರಥೋತ್ಸವ ಕಾರ್ಯಕ್ರಮ ಶನಿವಾರ ಸಡಗರದಿಂದ ಜರುಗಿತು.
ಸೀತಾ ಲಕ್ಷ್ಮಣ ಆಂಜನೇಯ ಸಮೇತ ಶ್ರೀರಾಮನ ಉತ್ಸವಮೂರ್ತಿಯನ್ನು ಅಲಂಕೃತ ಗೊಳಿಸಿ,ಅರವಟ್ಟಿಗೆ ಗಳಿಗೆ ಕರೆದುಕೊಂಡು ಹೋಗಿ ಪೂಜೆ ನೆರವೇರಿಸಿ ದೇವಾಲಯವನ್ನು ಮೂರು ಸುತ್ತು ಹಾಕಿಸಿ ರಥದಲ್ಲಿ ಕೂರಿಸಿ ನಂತರ ದಾಸಪ್ಪ ಹಾಗೂ ಪುರೋಹಿತರ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಶನಿವಾರ ಮಧ್ಯಾಹ್ನ ಪೂಜಾ ಕಾರ್ಯಕ್ರಮಗಳ ನಂತರ ಸಾವಿರಾರು ಭಕ್ತರ ಹರ್ಷೋದ್ಗಾರದಲ್ಲಿ ಬಣ್ಣ ಬಣ್ಣದ ಹೂಗಳಿಂದ ಅಲಂಕೃತ ತೇರನ್ನು ಎಳೆಯಲಾಯಿತು. ಬಂದಂತಹ ಭಕ್ತರು ದವನ ಸಮೇತ ಬಾಳೆಹಣ್ಣನ್ನು ತೇರಿನ ಮೇಲೆ ಎಸೆದು ಕೃತಾರ್ಥರಾದರು.
ದೇವಾಲಯವನ್ನು ವಿದ್ಯುತ್ ದೀಪಗಳಿಂದ ಹಾಗೂ ಹೂವುಗಳಿಂದ ಸಿಂಗಾರ ಮಾಡಲಾಗಿತ್ತು. ಬೆಳಿಗ್ಗೆಯೇ ನೆಲೆ ದೇವರಿಗೆ ವಿವಿಧ ಅಭಿಷೇಕಗಳನ್ನು ಮಾಡಿ, ಭಕ್ತರಿಗೆ ಮಹಾಮಂಗಳಾರತಿ ನೀಡಿ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು.
ಭಕ್ತರಿಗೆ ಹೆಸರುಬೇಳೆ, ಪಾನಕ, ನೀರು ಮಜ್ಜಿಗೆ ಹಾಗೂ ಪ್ರಸಾದ ಹಂಚಿದರು. ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.