ದಾಬಸ್ಪೇಟೆ: ನೆಲಮಂಗಲ ತಾಲ್ಲೂಕು ಹಾಲೇನಹಳ್ಳಿ ಗ್ರಾಮದ ಶುದ್ಧ ನೀರಿನ ಘಟಕ ಉದ್ಘಾಟನೆಯಾಗಿ 13 ದಿನ ಕಳೆದರೂ ನೀರು ಬರುತ್ತಿಲ್ಲ.
ಸೆ.27ರಂದು ಸಂಸದ ವೀರಪ್ಪ ಮೊಯಿಲಿ ಮತ್ತು ಶಾಸಕ ಶ್ರೀನಿವಾಸ ಮೂರ್ತಿ ತರಾತುರಿಯಲ್ಲಿ ರಾತ್ರಿ ವೇಳೆ ಘಟಕ ಉದ್ಘಾಟಿಸಿದ್ದರು.
ಸಮುದಾಯ ಶುದ್ಧ ಕುಡಿಯುವ ನೀರಿನ ಯೋಜನೆಯಡಿ ಮಾರುತಿ ಸುಜುಕಿ ಕಂಪನಿ ಈ ಘಟಕವನ್ನು ಕಟ್ಟಿಸಿಕೊಟ್ಟಿದ್ದು, ವಾಟರ್ ಲೈಫ್ ಇಂಡಿಯಾ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿದೆ.
ಘಟಕದ ನಿರ್ಮಾಣ ಮುಗಿದು ಕೆಲ ತಿಂಗಳುಗಳೇ ಆಗಿತ್ತು. ಅಂತೂ ಉದ್ಘಾಟನೆ ಆಯಿತಾದರೂ ಶುದ್ಧ ನೀರು ಮಾತ್ರ ಬರುತ್ತಿಲ್ಲ’ ಎಂಬ ದೂರು ಗ್ರಾಮಸ್ಥರದ್ದು.
’ಗ್ರಾಮದಲ್ಲಿ 150ಕ್ಕೂ ಹೆಚ್ಚು ಮನೆಗಳಿವೆ. ಅಕ್ಕಪಕ್ಕದಲ್ಲಿ ನಾಲ್ಕೈದು ಹಳ್ಳಿಗಳಿವೆ. ಅವರೆಲ್ಲರೂ ಈ ಘಟಕದಿಂದ ಶುದ್ಧ ನೀರು ಸಿಗುವ ಆಶಾಭಾವ ಹೊಂದಿದ್ದರು. ಆದರೆ ಇದುವರೆಗೆ ಕಾರ್ಯನಿರ್ವಹಿಸದ ಕಾರಣ ಅನಿವಾರ್ಯವಾಗಿ ಕೊಳಾಯಿ ನೀರನ್ನೇ ಕುಡಿಯಬೇಕಾಗಿ ಬಂದಿದೆ’ ಎನ್ನುತ್ತಾರೆ ಗ್ರಾಮದ ಶಿವಕುಮಾರ್.
ಸಾರ್ವಜನಿಕರಿಗೆ ಎಟಿಎಂ ರೂಪದ ಕಾರ್ಡ್ಗಳನ್ನು ಕೊಡಲಾಗಿದೆ. ಅದಕ್ಕೆ ಕರೆನ್ಸಿ ಹಾಕಿ ರಿಚಾರ್ಜ್ ಮಾಡಿದರೆ ನೀರು ಪಡೆಯಲು ಅವಕಾಶವಿದೆ. ನಿರ್ವಹಣೆ ಹೊತ್ತ ವಾಟರ್ ಲೈಫ್ ಇಂಡಿಯಾದ ಎಂಜಿನಿಯರ್ ಬಂದು ಚಾಲನೆ ನೀಡಬೇಕಿತ್ತು. ಉದ್ಘಾಟನೆಯ ದಿನ ಬಂದು ಹೋದವರು ಇದುವರೆಗೆ ಬಂದಿಲ್ಲ. ಅವರಿಗೆ ಕರೆ ಮಾಡಿದರೆ ಇವತ್ತು, ನಾಳೆ ಅನ್ನುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.