ADVERTISEMENT

ಆಷಾಢ ಮಾಸ: ಏರುತ್ತಿದೆ ಸೊಪ್ಪಿನ ಬೆಲೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 20:11 IST
Last Updated 4 ಜುಲೈ 2019, 20:11 IST
ಸಂತೆಯಲ್ಲಿ ತರಕಾರಿ ಮಾರಾಟ
ಸಂತೆಯಲ್ಲಿ ತರಕಾರಿ ಮಾರಾಟ   

ದಾಬಸ್‌ಪೇಟೆ: ಇಲ್ಲಿನ ಬುಧವಾರದ ಸಂತೆಯಲ್ಲಿ ತರಕಾರಿ ಮತ್ತು ಸೊಪ್ಪಿನ ಬೆಲೆ ದುಬಾರಿಯಾಗಿ, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

ಆಷಾಢ ಮಾಸ ಆರಂಭವಾಗಿದ್ದು, ಯಾವುದೇ ಶುಭಕಾರ್ಯಗಳು ನಡೆಯದೇ ಇರುವುದರಿಂದ ತರಕಾರಿ ಹಾಗೂ ಸೊಪ್ಪಿನ ಬೆಲೆಗಳಲ್ಲಿ ಇಳಿಕೆಯಾಗಲಿದೆ ಅನ್ನುವ ಲೆಕ್ಕಾಚಾರವಿತ್ತು. ಆದರೆ, ಒಂದಷ್ಟು ತರಕಾರಿಗಳ ಬೆಲೆ ಇಳಿಕೆಯಾಗಿರುವುದು ಬಿಟ್ಟರೆ ಉಳಿದಂತೆಹಿಂದಿನ ಬೆಲೆಗಳೇ ಇರುವುದರಿಂದ ಗ್ರಾಹಕರಿಗೆ ಹೊರೆಯಾಗಿದೆ.

ಕೆ.ಜಿಗೆ ನೂರು ರೂಪಾಯಿ ಇದ್ದ ಹುರುಳಿಕಾಯಿ ಸದ್ಯ ₹50ಕ್ಕೆ ಇಳಿದಿದೆ. ಆದರೆ, ಕ್ಯಾರೆಟ್ ಬೆಲೆಯ ಜೊತೆಗೆ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದು ಕೆ.ಜಿಗೆ 80ರ ಆಸುಪಾಸಿನಲ್ಲಿದೆ. ಬೀಟ್ ರೂಟ್ ಬೆಲೆ ₹ 50 ತಲುಪಿದೆ.

ADVERTISEMENT

ಹಸಿ ಬಟಾಣಿ ಮಾರುಕಟ್ಟೆಗೆ ಅಷ್ಟಾಗಿ ಬಾರದೆ ಇರುವುದರಿಂದ ಇದರ ಧಾರಣೆಯಂತೂ ಗಗನಮುಖಿಯಾಗಿ ಏರುತ್ತಿದೆ. ದಪ್ಪ ಮೆಣಸಿನ ಕಾಯಿ ಬೆಲೆಯೂ ಏರುಗತಿಯಲ್ಲಿಯೇ ಇದೆ. ಹಾಗಲಕಾಯಿ ಬೆಲೆ ₹60 ಆಗಿದೆ.

ಹಸಿ ಮೆಣಸಿನಕಾಯಿ, ಹೀರೇಕಾಯಿ, ಬೆಂಡೆ, ಆಲೂಗಡ್ಡೆ ಸಹಿತ ತರಕಾರಿಗಳ ಬೆಲೆಯೂ ₹20ಕ್ಕಿಂತ ಕೆಳಗೆ ಇಳಿದೇ ಇಲ್ಲ. ಟೊಮೆಟೋ ಬೆಲೆ ಸ್ಥಿರವಾಗಿದೆ. ಈರುಳ್ಳಿ ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ. ಒಂದು ವರ್ಷದಿಂದಲೂ ಅದೇ ದರದಲ್ಲಿ ಮಾರಾಟವಾಗುತ್ತಿದೆ. ಆದರೆ, ಬೆಳ್ಳುಳ್ಳಿ ಮಾತ್ರ ₹80ಕ್ಕೆ ಏರಿದೆ.

ಸೊಪ್ಪು ದರ ಕಂತೆಗೆ
ಕೊತ್ತಂಬರಿ ₹50
ಮೆಂತ್ಯ ₹40
ಸಬ್ಬಸಿಗೆ ₹40
ಪುದೀನ ₹40
ದಂಟು ಪಾಲಕ್ ₹20

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.