ADVERTISEMENT

ದರ್ಶನ್ ಹುಟ್ಟುಹಬ್ಬ: ಕಾನ್‌ಸ್ಟೆಬಲ್‌ಗೆ ಪಂಚ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 22:43 IST
Last Updated 17 ಫೆಬ್ರುವರಿ 2020, 22:43 IST

ಬೆಂಗಳೂರು: ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ ಲೇಔಟ್‌ನಲ್ಲಿ ಶನಿವಾರ ತಡರಾತ್ರಿ ಆಯೋಜಿಸಿದ್ದ ನಟ ದರ್ಶನ್‌ ಹುಟ್ಟುಹಬ್ಬ ಕಾರ್ಯಕ್ರಮದ ವೇಳೆ ಕಾನ್‌ಸ್ಟೆಬಲ್ ಡಿ.ಆರ್.ದೇವರಾಜ್ ಎಂಬುವವರ ಮೇಲೆ ಹಲ್ಲೆ ಮಾಡಲಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ತಮ್ಮ ಮೇಲೆ ನಡೆದಿರುವ ಹಲ್ಲೆ ಸಂಬಂಧ ಜ್ಞಾನಭಾರತಿ ಠಾಣೆಯ ಕಾನ್‌ಸ್ಟೆಬಲ್ ದೇವರಾಜ್ ದೂರು ನೀಡಿದ್ದಾರೆ. ದರ್ಶನ್ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಿದ್ದ ವ್ಯವಸ್ಥಾಪಕರು ಹಾಗೂ ಅಪರಿಚಿತ ಅಭಿಮಾನಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಐಡಿಯಲ್ ಹೋಮ್ ಲೇಔಟ್‌ನಲ್ಲಿರುವ ದರ್ಶನ್ ಮನೆ ಎದುರು ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲಿಯ ಭದ್ರತೆಗಾಗಿ ದೇವರಾಜ್ ಅವರನ್ನು ನಿಯೋಜಿಸಲಾಗಿತ್ತು. ಕಾರ್ಯಕ್ರಮ ಸ್ಥಳದಲ್ಲಿ ಅಭಿಮಾನಿಗಳು ಸರದಿಯಲ್ಲಿ ಹೋಗಲು ಆಯೋಜಕರು ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ, ನೂಕುನುಗ್ಗಲು ಉಂಟಾಗಿತ್ತು’

ADVERTISEMENT

‘ನೂಕುನುಗ್ಗಲು ನಿಯಂತ್ರಿಸುವ ಕೆಲಸದಲ್ಲಿ ದೇವರಾಜ್ ನಿರತರಾಗಿದ್ದರು. ಅದೇ ಸಂದರ್ಭದಲ್ಲಿ ಅವರ ಮೂಗಿಗೆ ಯಾರೋ ಪಂಚ್‌ ಮಾಡಿದ್ದರು. ಕಣ್ಣಿಗೂ ತೀವ್ರ ಹಾನಿ ಆಗಿ ರಕ್ತ ಸೋರುತ್ತಿತ್ತು. ಸಹೋದ್ಯೋಗಿಗಳೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರು’ ಎಂದು ಪೊಲೀಸರು ಹೇಳಿದರು.

‘ಹುಟ್ಟುಹಬ್ಬ ಆಯೋಜಿಸಿದ್ದ ವ್ಯವಸ್ಥಾಪಕರು ಹಾಗೂ ಕೆಲ ಅಭಿಮಾನಿಗಳೇ ಈ ಹಲ್ಲೆಗೆ ಕಾರಣ. ಅವರೆಲ್ಲರ ವಿರುದ್ಧ, ಅಪರಾಧ ಸಂಚು (ಐಪಿಸಿ 34) ಹಾಗೂಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ (ಐಪಿಸಿ 353) ಆರೋಪದಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಹುಟ್ಟುಹಬ್ಬ ಆಚರಣೆಯಿಂದ ಸ್ಥಳೀಯ ನಿವಾಸಿಗಳಿಗೂ ಕಿರಿಕಿರಿ ಆಗಿದೆ. ಈ ಸಂಬಂಧವೂ ಠಾಣೆಯಲ್ಲಿ ಎನ್‌ಸಿಆರ್‌ (ಗಂಭೀರವಲ್ಲದ ಪ್ರಕರಣ) ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.