ಬೆಂಗಳೂರು: ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಮತ್ತು ತುಷಾರ್ ಗಿರಿನಾಥ್ ನಡುವೆ ಯಾವುದೋ ’ಡೀಲ್‘(ಅವ್ಯವಹಾರ) ನಡೆದಿದೆ ಎಂದು ವಿಶ್ವ ಸನಾತನ ಪರಿಷತ್ತಿನ ಅಧ್ಯಕ್ಷ ಎಸ್.ಭಾಸ್ಕರನ್ ಆರೋಪಿಸಿದರು.
‘ಜಮೀರ್ ಅಹಮದ್, ರಿಜ್ವಾನ್ ಅರ್ಷದ್ ಮತ್ತು ಇನ್ನೂ ಇಬ್ಬರು ಪಾಲಿಕೆ ಮಾಜಿ ಸದಸ್ಯರ ಜತೆ ತುಷಾರ್ ಗಿರಿನಾಥ್ ಅವರು ವಾರದ ಹಿಂದೆ ಗೋಪ್ಯ ಸಭೆ ನಡೆಸಿದ್ದಾರೆ. ಇದರ ಚಿತ್ರಗಳು ನನ್ನ ಬಳಿ ಇವೆ. ಸಭೆಯ ಬಳಿಕ ಜಮೀರ್ ಆಗಲಿ, ತುಷಾರ್ ಗಿರಿನಾಥ್ ಆಗಲಿ ಮಾಹಿತಿ ನೀಡಿಲ್ಲ. ಇದನ್ನು ಗಮನಿಸಿದರೆ ನಡೆಯಬಾರದ ಡೀಲ್ ನಡೆದಿದೆ ಎಂಬುದು ಸ್ಪಷ್ಟ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಇಷ್ಟು ದಿನ ಬಿಬಿಎಂಪಿ ಆಸ್ತಿ ಎಂದು ಹೇಳುತ್ತಿದ್ದವರು ಈಗ ಏಕಾಏಕಿ ನಮ್ಮ ಆಸ್ತಿಯಲ್ಲ ಎನ್ನುತ್ತಿದ್ದಾರೆ. ವಕ್ಫ್ ಮಂಡಳಿಯೇ ಮಾಹಿತಿ ಹಕ್ಕು ಕಾಯ್ದೆಯಡಿ ನೀಡಿರುವ ದಾಖಲೆಗಳ ಪ್ರಕಾರ ಇದು ಬಿಬಿಎಂಪಿ ಆಟದ ಮೈದಾನ. ವಕ್ಫ್ ಮಂಡಳಿ ಆಸ್ತಿಯಾಗಿದ್ದರೆ ಇಷ್ಟು ದಿನ ನಾಮಫಲಕ ಹಾಕದೆ ಬಿಡುತ್ತಿರಲಿಲ್ಲ’ ಎಂದರು.
‘ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ತುಷಾರ್ ಗಿರಿನಾಥ್ ಉಲ್ಲೇಖಿಸಿದ್ದಾರೆ. ಸುಪ್ರೀಂ ಕೋರ್ಟ್ಗೆ ಹೋಗಿದ್ದವರು ರುಕ್-ಉಲ್-ಮುಲ್ಕ್ ಎಸ್. ಅಬ್ದುಲ್ ವಾಜಿದ್ ಎಂಬುವರೇ ಹೊರತು ವಕ್ಫ್ ಮಂಡಳಿಯಾಗಲಿ, ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್(ಸಿಎಂಎ) ಆಗಲಿ ಅಲ್ಲ. ಈ ಪ್ರಕರಣದಲ್ಲಿ ಅವರು ಪ್ರತಿವಾದಿಗಳೇ ಅಲ್ಲ. ಪ್ರತಿವಾದಿ ಅಲ್ಲದವರಿಗೆ ಈ ಆಸ್ತಿ ಮಾಲೀಕತ್ವ ಹೇಗೆ ಹೋಗುತ್ತದೆ’ ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.