ADVERTISEMENT

ಡೆಲಿವರಿ ಬಾಯ್ ಸಾವು: ಬಿಎಂಟಿಸಿ ಚಾಲಕ ಬಂಧನ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 22:30 IST
Last Updated 24 ಫೆಬ್ರುವರಿ 2023, 22:30 IST
   

ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಜಲಭವನ ಬಳಿ ಅಪಘಾತ ಮಾಡಿ ಡೆಲಿವರಿ ಬಾಯ್ ಸೈನುಲ್ಲಾ ಅಹಮಮದ್ ಬಾಬ್ರೂಯ್ (20) ಸಾವಿಗೆ ಕಾರಣವಾಗಿದ್ದ ಆರೋಪದಡಿ ಬಿಎಂಟಿಸಿ ಚಾಲಕ ಬಸವರಾಜ್ ಅವರನ್ನು ಮೈಕೊ ಲೇಔಟ್ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಬಿಎಂಟಿಸಿ 34ನೇ ಡಿಪೊ ಚಾಲಕ ಬಸವರಾಜ್, ಫೆ. 19ರಂದು ಅಪಘಾತವನ್ನುಂಟು ಮಾಡಿ ಪರಾರಿಯಾಗಿದ್ದ. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳು ಹಾಗೂ ಪ್ರತ್ಯಕ್ಷದರ್ಶಿಗಳು ನೀಡಿದ್ದ ದೂರು ಆಧರಿಸಿ ಈತನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಅಸ್ಸಾಂನ ಸೈನುಲ್ಲಾ, ಜೆ.ಪಿ. ನಗರದಲ್ಲಿ ವಾಸವಿದ್ದರು. ಸ್ವಿಗ್ಗಿ ಕಂಪನಿಯಲ್ಲಿ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದರು. ಸ್ನೇಹಿತ ಮಜರಲಿ ಸಲ್ಕರ್ ಜೊತೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಇದೇ ಮಾರ್ಗದಲ್ಲಿ ಹೊರಟಿದ್ದ ಬಸವರಾಜ್, ಅತಿ ವೇಗ ಹಾಗೂ ನಿ‌ರ್ಲಕ್ಷ್ಯದಿಂದ ಬಸ್ ಚಲಾಯಿಸಿದ್ದರು.’

ADVERTISEMENT

‘ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದಿತ್ತು. ರಸ್ತೆಗೆ ಬಿದ್ದಿದ್ದ ಸೈನುಲ್ಲಾ ತಲೆಮೇಲೆ ಬಸ್ಸಿನ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದರು. ಹಿಂಬದಿ ಸವಾರ ಮಜರಲಿ ಗಾಯಗೊಂಡಿದ್ದರು’ ಎಂದು ಪೊಲೀಸರು ತಿಳಿಸಿದರು.

ಆಸ್ಪತ್ರೆಗೆ ಸೇರಿಸದೇ ಪರಾರಿ: ‘ಅಪಘಾತದ ಬಳಿಕ ಬಸ್ಸಿನಿಂದ ಇಳಿದಿದ್ದ ಚಾಲಕ ಬಸವರಾಜ್, ಗಾಯಾಳುಗಳ ಬಳಿ ಹೋಗಿ ನರಳುವುದನ್ನು ನೋಡಿದ್ದ. ಆದರೆ, ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿರಲಿಲ್ಲ. ಸ್ಥಳದಲ್ಲಿ ಜನರು ಸೇರುವ ಮುನ್ನವೇ ಆತ ಬಸ್‌ ಸಮೇತ ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.