ಬೆಂಗಳೂರು: ‘ಹದಿನೈದು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಡೆ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಸ್ವಂತ ಜಿಲ್ಲೆ ಅಥವಾ ಪಕ್ಕದ ಜಿಲ್ಲೆಗಳಿಗೆ ವರ್ಗಾವಣೆ ನೀಡಬೇಕು’ ಎಂದು ಒತ್ತಾಯಿಸಿ ವರ್ಗಾವಣೆ ವಂಚಿತ ಶಿಕ್ಷಕರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಕಚೇರಿ ಎದುರು ಸೇರಿದ್ದ ಶಿಕ್ಷಕರು, ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗಿದರು. ‘ವರ್ಗಾವಣೆ ಕೊಡಿ, ಇಲ್ಲವೇ ವಿಷ ಕೊಡಿ’, ‘ಸೇವಾ ಅವಧಿಯಲ್ಲಿ ಒಮ್ಮೆಯಾದರೂ ಸ್ವಂತ ಜಿಲ್ಲೆಗೆ ವರ್ಗಾವಣೆ ಕೊಡಿ’ ಎಂಬ ಬರಹವುಳ್ಳ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.
‘15 ವರ್ಷವಾದರೂ ವರ್ಗಾವಣೆ ಸಿಗದಿದ್ದರಿಂದ ಶಿಕ್ಷಕರು ಹಾಗೂ ಅವರ ಕುಟುಂಬದವರು ಮಾನಸಿಕವಾಗಿ ನೊಂದಿದ್ದಾರೆ. ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ವೃತ್ತಿ ಜೀವನದಲ್ಲಿ ಒಂದು ಸಲವಾದರೂ ಸ್ವಂತ ಜಿಲ್ಲೆ ಅಥವಾ ಪಕ್ಕದ ಜಿಲ್ಲೆಗಳಿಗೆ ವರ್ಗಾವಣೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ವರ್ಗಾವಣೆ ವಂಚಿತ ಶಿಕ್ಷಕರ ಸಂಘ, ಪ್ರೌಢಶಾಲಾ (ಗ್ರಾಮೀಣ) ಶಿಕ್ಷಕರ ಸಂಘದ ಪದಾಧಿಕಾರಿಗಳೂ ಪ್ರತಿಭಟನೆಯಲ್ಲಿದ್ದರು. ಶಾಸಕ ಸತೀಶ ಜಾರಕಿಹೊಳಿ ಭೇಟಿ ನೀಡಿ ಬೆಂಬಲ ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.