ADVERTISEMENT

ಬಡ್ತಿ ನಿಲ್ಲಿಸಿ, ಒಳಮೀಸಲಾತಿ ಜಾರಿ ಮಾಡಲು ಆಗ್ರಹ

ಅರೆಬೆತ್ತಲೆ ಮೆರವಣಿಗೆ ಮಾಡಿ, ರಸ್ತೆ ತಡೆದು ಪ್ರತಿಭಟನೆ ನಡೆಸಿದ ಹೋರಾಟ ಸಮಿತಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 23:30 IST
Last Updated 9 ಜೂನ್ 2025, 23:30 IST
ಸೋಮವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಮಾದಿಗರ ಕ್ರಾಂತಿಕಾರಿ ಸಂಘರ್ಷ ಹೋರಾಟದಲ್ಲಿ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿಯ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು
ಪ್ರಜಾವಾಣಿ ಚಿತ್ರ:ರಂಜು ಪಿ.
ಸೋಮವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಮಾದಿಗರ ಕ್ರಾಂತಿಕಾರಿ ಸಂಘರ್ಷ ಹೋರಾಟದಲ್ಲಿ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿಯ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು ಪ್ರಜಾವಾಣಿ ಚಿತ್ರ:ರಂಜು ಪಿ.   

ಬೆಂಗಳೂರು: ‘ಒಳಮೀಸಲಾತಿ ಜಾರಿಯಾಗುವವರೆಗೆ ಬಡ್ತಿಯಲ್ಲಿ ಮೀಸಲಾತಿ ನೀಡುವುದನ್ನು ನಿಲ್ಲಿಸಲು ಆದೇಶಿಸಬೇಕು. ಇಲ್ಲದೇ ಇದ್ದರೆ ನಾವು ಜೀವಕ್ಕೆ ಅಪಾಯ ತಂದುಕೊಳ್ಳುವ ಹೋರಾಟಕ್ಕೆ ಇಳಿಯುತ್ತೇವೆ. ಅದಕ್ಕೆ ಸರ್ಕಾರವೇ ಹೊಣೆಯಾಗಲಿದೆ’ ಎಂದು ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾದಿಗರ ಕ್ರಾಂತಿಕಾರಿ ಸಂಘರ್ಷ ಹೋರಾಟದಲ್ಲಿ ಪಾಲ್ಗೊಂಡಿದ್ದ ಸಮುದಾಯದ ಮುಖಂಡರು ಈ ಘೋಷಣೆ ಮಾಡಿದರು. 

ಹೋರಾಟದ ನೇತೃತ್ವ ವಹಿಸಿರುವ ಬಿ.ಆರ್‌. ಭಾಸ್ಕರ ಪ್ರಸಾದ್‌, ‘ಒಳಮೀಸಲಾತಿಗಾಗಿ 98 ದಿನಗಳಿಂದ ಅರೆಬೆತ್ತಲೆ ರಥಯಾತ್ರೆ ಮಾಡಲಾಗುತ್ತಿದೆ. ನಮ್ಮ ಸಮುದಾಯದೊಳಗೇ ಇರುವ ಮನುವಾದಿಗಳು, ಒಳಮೀಸಲಾತಿ ಹೋರಾಟಗಾರರು ಎಂದು ಹೇಳಿಕೊಳ್ಳುತ್ತಿದ್ದವರು, ಸಮುದಾಯದ ರಾಜಕಾರಣಿಗಳೆಲ್ಲ ಸೇರಿ ಈ ಪಾದಯಾತ್ರೆಯನ್ನು ಹತ್ತಿಕ್ಕಲು ಪ್ರಯತ್ನಿಸಿದರು. ಪ್ರಕರಣ ದಾಖಲಿಸಿದರು. ಬಂಧಿಸಿದರು. ಹೋರಾಟ ಮಾಡಿ, ಆದರೆ, ಕಾಂಗ್ರೆಸ್‌ಗೆ ತೊಂದರೆಯಾಗದಂತೆ ಮಾಡಿ ಎಂದು ಕೆಲವರು ಸಲಹೆ ನೀಡಿದ್ದರು’ ಎಂದು ಆರೋಪಿಸಿದರು.

ADVERTISEMENT

ಮಾದಿಗರಿಗೆ ಸಿಗಬೇಕಾದ ಸೌಲಭ್ಯಗಳನ್ನು ಹೊಲೆಯರು ಬಳಸಿಕೊಳ್ಳುತ್ತಿದ್ದಾರೆ ಎಂದು ಸದಾಶಿವ ಆಯೋಗವೇ ಹೇಳಿದೆ. ಆದರೆ, ಮಾದಿಗ, ಹೊಲೆಯ ಎಂದೆಲ್ಲ ಹೇಳಬೇಡಿ. ಹಾಗೆ ಹೇಳಿದರೆ ಒಡಕು ಉಂಟಾಗುತ್ತದೆ. ಎಲ್ಲರೂ ದಲಿತರು ಎಂದು ಹೇಳಬೇಕು ಎಂದು ಸಚಿವ ಎಚ್‌.ಸಿ.ಮಹದೇವಪ್ಪ ತಿಳಿಸಿದ್ದರು. ಮಹದೇವಪ್ಪ ಮಾದಿಗರ ವಿರೋಧಿ ಎಂದು ಹರಿಹಾಯ್ದರು.

ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಮಾತನಾಡಿ, ‘ಪಂಜಾಬ್‌ನಲ್ಲಿ 1975ರಿಂದಲೇ ಒಳಮೀಸಲಾತಿ ಇತ್ತು. ನಮ್ಮನ್ನು ಹೋಮೋಜೀನಿಯಸ್‌ ಎಂದು ಕರೆದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ 2005ರಲ್ಲಿ ನೀಡಿದ ತೀರ್ಪು ನಮಗೆ ಮಾರಕವಾಯಿತು. ಇದನ್ನು ಪಂಜಾಬ್‌ ಬಿಟ್ಟು ಬೇರೆ ಯಾವ ರಾಜ್ಯ ಸರ್ಕಾರಗಳೂ ಪ್ರಶ್ನಿಸಿಲ್ಲ’ ಎಂದರು.

‘ಒಳಮೀಸಲಾತಿಯನ್ನು ಜಾರಿ ಮಾಡುವವರೆಗೆ ಬಡ್ತಿ ಮೀಸಲಾತಿ ನೀಡುವುದಿಲ್ಲ ಎಂದು ಆದೇಶ ಬಾರದೇ ಹೋದರೆ ನಮ್ಮನ್ನು ನಾವೇ ಕೊಂದುಕೊಳ್ಳುತ್ತೇವೆ’ ಎಂದು ಹೋರಾಟದ ನಾಯಕರು ಎಚ್ಚರಿಸಿದರು.

ಸಂಜೆವರೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಿದ್ದರಿಂದ ಸ್ವಾತಂತ್ರ್ಯ ಉದ್ಯಾನದಿಂದ ರಸ್ತೆಗೆ ಇಳಿದರು. ಪೊಲೀಸರು ಬ್ಯಾರಿಕೇಡ್‌ ಹಾಕಿ ಪ್ರತಿಭಟನಕಾರರು ಮುಂದಕ್ಕೆ ಹೋಗದಂತೆ ತಡೆದರು. ಐವರು ಮುಖಂಡರು ಮುಖ್ಯಮಂತ್ರಿಯ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ ಬಳಿಕ ಪ್ರತಿಭಟನೆ ಕೊನೆಗೊಂಡಿತು.

ಮುಖಂಡರಾದ ಎಸ್‌. ಅರುಣ್‌ ಕುಮಾರ್‌, ಬಾಳೆಕಾಯಿ ಶ್ರೀನಿವಾಸ್‌, ಪ್ರಭುರಾಜ್‌ ಕೊಡ್ಲಿ, ಬಾಲಸ್ವಾಮಿ ಕೊಡ್ಲಿ, ರಾ.ಚಿಂತನ್‌,  ಚೇತನ್‌ ಅಹಿಂಸಾ  ಭಾಗವಹಿಸಿದ್ದರು.

ವರದಿ ಬಳಿಕ ಒಳಮೀಸಲಾತಿ ಜಾರಿ: ಸಿ.ಎಂ

ಒಳಮೀಸಲಾತಿ ಜಾರಿ ಮಾಡುವುದಕ್ಕಾಗಿಯೇ ಪರಿಶಿಷ್ಟ ಜಾತಿಯ ಸಮೀಕ್ಷೆ ನಡೆಸಲಾಗುತ್ತಿದೆ. ಅದರ ವರದಿ ಬಂದ ಬಳಿಕ ಒಳಮೀಸಲಾತಿ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ತಮ್ಮನ್ನು ಭೇಟಿ ಮಾಡಿದ ಹೋರಾಟಗಾರರ ನಿಯೋಗದೊಂದಿಗೆ ಮಾತನಾಡಿದ ಅವರು ‘ನೀವು ಬೇಡ ಎಂದು ಹೇಳಿದರೂ ಒಳಮೀಸಲಾತಿ ಜಾರಿ ಮಾಡೇ ಮಾಡುತ್ತೇವೆ. ಇದು ನಮ್ಮ ಪಕ್ಷದ ನಮ್ಮ ಸರ್ಕಾರದ ಬದ್ಧತೆ. ನಿಖರ ದತ್ತಾಂಶಕ್ಕಾಗಿ ಕಾಯುತ್ತಿದ್ದೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.