
ಬೆಂಗಳೂರು: ಕನಕಪುರ ರಸ್ತೆಯ ಸಿಲ್ಕ್ ಇನ್ಸ್ಟಿಟ್ಯೂಟ್ ಮೆಟ್ರೊ ನಿಲ್ದಾಣ ಸಮೀಪದಲ್ಲಿರುವ ಮಂಡಲ ಸಾಂಸ್ಕೃತಿಕ ಕೇಂದ್ರದಲ್ಲಿ ಧಾತು ಬೊಂಬೆಗಳ ಥಿಯೇಟರ್ ಜನವರಿ 9ರಿಂದ ಮೂರು ದಿನ ಧಾತು ಅಂತರರಾಷ್ಟ್ರೀಯ ಬೊಂಬೆಯಾಟ ಉತ್ಸವ ಹಮ್ಮಿಕೊಂಡಿದೆ.
ಕರ್ನಾಟಕದ ನಾನಾ ಭಾಗಗಳ ಕಲಾವಿದರು ತಾವೇ ರೂಪಿಸಿಕೊಂಡಿರುವ ಬೊಂಬೆಗಳನ್ನು ಬಳಸಿ ರಾಮಾಯಣ, ಮಹಾಭಾರತ ಸಹಿತ ಪ್ರಮುಖ ಪ್ರಸಂಗಗಳ ಪ್ರದರ್ಶನ ನೀಡುವರು. ಇಟಲಿಯ ಕಲಾವಿದರ ತಂಡವೂ ಬೊಂಬೆ ಪ್ರದರ್ಶನ ನೀಡಲಿದೆ.
ಈಚನೂರು ಶೈಲಿಯ ತಂತಿ ಬೊಂಬೆ, ಮೂಡಲಪಾಯ, ದೊಡ್ಡಾಟ, ಯಕ್ಷಗಾನ, ಸೂತ್ರದ ಬೊಂಬೆ, ಮರದ ಬೊಂಬೆ, ಸಲಾಕಿ ಬೊಂಬೆ, ಕೀಲು ಬೊಂಬೆ, ತಾರಮ್ಮಯ್ಯ ಬೊಂಬೆಗಳು ಉತ್ಸವದ ಆಕರ್ಷಣೆಯಾಗಲಿವೆ.
ಅಮೆರಿಕದಲ್ಲಿ ಎಂಜಿನಿಯರ್ ಆಗಿರುವ ನಗರದ ಅನುಪಮಾ ಹೊಸಕೆರೆ ಅವರು, ಮೂರು ದಶಕದಿಂದ ಕರ್ನಾಟಕ ಮಾತ್ರವಲ್ಲದೇ ದೇಶದ ನಾನಾ ರಾಜ್ಯಗಳ ಬೊಂಬೆಗಳು, ಹಲವು ದೇಶಗಳ ಬೊಂಬೆಗಳನ್ನು ಸಂಗ್ರಹಿಸಿ ನಾಲ್ಕು ವರ್ಷದ ಹಿಂದೆ ತಲಘಟ್ಟಪುರದಲ್ಲಿ ಧಾತು ಬೊಂಬೆಗಳ ಥಿಯೇಟರ್ ರೂಪಿಸಿದ್ದಾರೆ.
ಥಿಯೇಟರ್ನಲ್ಲಿ ನಿಯಮಿತವಾಗಿ ಬೊಂಬೆಗಳ ಪ್ರದರ್ಶನಕ್ಕೂ ಅವಕಾಶವಿದೆ. ಮಕ್ಕಳು, ಆಸಕ್ತರಿಗೂ ವಾರಾಂತ್ಯ ಬೊಂಬೆಗಳ ಕುರಿತ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. 16ನೇ ಆವೃತ್ತಿಯ ಬೊಂಬೆಯಾಟ ಉತ್ಸವಕ್ಕೆ ಥಿಯೇಟರ್ ಸಿದ್ದವಾಗುತ್ತಿದೆ ಎಂದು ಅನುಪಮಾ ತಿಳಿಸಿದರು.
ಉಚಿತ ಪ್ರವೇಶ ‘
ಬಾಲಕಿಯಾಗಿದ್ದಾಗ ಕೇಳುತ್ತಿದ್ದ ಕಥೆಯಿಂದ ಬೊಂಬೆಗಳ ಮೇಲೆ ಆಸಕ್ತಿ ಮೂಡಿತು. ಆನಂತರ ಬೊಂಬೆ ಸಂಗ್ರಹ ಹವ್ಯಾಸವಾಗಿ ಥಿಯೇಟರ್ ರೂಪಿಸಿ ಅಂತರರಾಷ್ಟ್ರೀಯ ಉತ್ಸವ ಆಯೋಜಿಸುತ್ತಿದ್ದೇವೆ. ಉತ್ಸವಕ್ಕೆ ಪ್ರವೇಶ ಉಚಿತವಾಗಿರಲಿದೆ’ ಎಂದು ಬೊಂಬೆ ತಜ್ಞೆ ಅನುಪಮಾ ಹೊಸಕೆರೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.