ADVERTISEMENT

ಮತ್ತೆ ಒತ್ತಡಕ್ಕೆ ಸಿಲುಕಿದ ಅನರ್ಹ ಶಾಸಕರು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 19:22 IST
Last Updated 8 ನವೆಂಬರ್ 2019, 19:22 IST
   

ಬೆಂಗಳೂರು: ಉಪ ಚುನಾವಣೆ ಮುಂದೂಡಬೇಕೆಂಬ ಮನವಿ ಯನ್ನುಸುಪ್ರೀಂಕೋರ್ಟ್‌ ಶುಕ್ರವಾರ ತಿರಸ್ಕರಿಸಿರುವುದರಿಂದ ಅನರ್ಹ ಶಾಸಕರು ಮತ್ತೆ ಆತಂಕಕ್ಕೆ ಸಿಲುಕಿದ್ದಾರೆ.

ನ.11 ರಿಂದ ಉಪಚುನಾವಣೆ ನೀತಿ ಸಂಹಿತೆ ಜಾರಿ ಆಗಲಿದೆ. ಈ ಮಧ್ಯೆ ಅನರ್ಹತೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ಹೊರಬಿದ್ದಿಲ್ಲ.

ಇದರಿಂದ ಮುಂದೇನು ಮಾಡ ಬೇಕು ಎಂಬ ದಾರಿ ಕಾಣದೇ ಅನರ್ಹ ಶಾಸಕರು ಗೊಂದಲಕ್ಕೊಳಾಗಿದ್ದಾರೆ.

ADVERTISEMENT

ನಾಮಪತ್ರ ಸಲ್ಲಿಕೆಗೆ ನ.18 ಕಡೆಯ ದಿನವಾಗಿದ್ದು, ಆ ವೇಳೆಗೆ ವ್ಯತಿರಿಕ್ತ ತೀರ್ಪು ಬಂದರೆ ಅನರ್ಹರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಸ್ವತಃ ತಾವೇ ಸ್ಪರ್ಧಿಸಲು ಕಷ್ಟವಾದರೆ, ತಮ್ಮ ಕುಟುಂಬದವರನ್ನು ಕಣಕ್ಕಿಳಿಸಬೇಕಾಗುತ್ತದೆ. ಆಗ ತಾವು ಅಂದುಕೊಂಡಂತೆ ಸಚಿವರಾಗಲು ಸಾಧ್ಯವಾಗುವುದಿಲ್ಲ ಎಂಬ ನೋವು ಅವರನ್ನು ಕಾಡಿದೆ.

ಡಿಸೆಂಬರ್‌ 5 ರಂದು ನಡೆಯುವ ಉಪಚುನಾವಣೆಗೆ ಅಧಿಸೂಚನೆ ಸೋಮವಾರ ಹೊರಬೀಳಲಿದೆ. ಅಷ್ಟರರೊಳಗೆ ತೀರ್ಪು ಹೊರಬೀಳಬಹುದು ಎಂಬ ನಿರೀಕ್ಷೆ ಅನರ್ಹ ಶಾಸಕರದ್ದಾಗಿತ್ತು. ಚುನಾವಣೆ ಮುಂದೂಡಿಕೆ ಕುರಿತ ಅರ್ಜಿಯನ್ನು ಬುಧವಾರ ಸಲ್ಲಿಸಲು ಸುಪ್ರೀಂಕೋರ್ಟ್‌ ಸೂಚಿಸಿದೆ. ಇದರಿಂದ ವೃಥಾ ಕಾಲಹರಣವಾಗಬಹುದೇ ಎಂಬ ಆತಂಕವೂ ಅನರ್ಹ ಶಾಸಕರನ್ನು ಕಾಡಿದೆ.

ಟಿಕೆಟ್‌ ಯಾರಿಗೆ ಕೊಡಬೇಕು ಎಂಬ ಗೊಂದಲವೂ ಬಿಜೆಪಿಯನ್ನು ಕಾಡಿದೆ. ಅನರ್ಹ ಶಾಸಕರಿಗೆ ಟಿಕೆಟ್‌ ಕೊಟ್ಟು, ಆ ಸಂದರ್ಭದಲ್ಲಿ ವ್ಯತಿರಿಕ್ತ ತೀರ್ಪು ಬಂದರೆ ಯಾರಿಗೆ ಟಿಕೆಟ್ ನೀಡಬೇಕು. ಪಕ್ಷದಲ್ಲೂ ಟಿಕೆಟ್‌ಗಾಗಿ ಒತ್ತಡ ಹೇರುವ ಸಾಧ್ಯತೆ ಇರುತ್ತದೆ.

ಈ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ಚರ್ಚೆಯೂ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.