ಹೆಸರಘಟ್ಟ: ದೊಡ್ಡಬ್ಯಾಲಕೆರೆ ಗ್ರಾಮದ ಕೆರೆ ಅಂಗಳಕ್ಕೆ ಕಿಡಿಗೇಡಿಗಳು ಕಟ್ಟಡದ ತ್ಯಾಜ್ಯ, ಕೋಳಿ ತ್ಯಾಜ್ಯ ಮತ್ತು ಕಸ ಸುರಿದು ನೀರನ್ನು ಕಲುಷಿತಗೊಳಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
‘ಗ್ರಾಮದ ಸರ್ವೆ ನಂ 16ರಲ್ಲಿ 16 ಎಕರೆ 2 ಕುಂಟೆ ಕೆರೆ ಜಾಗವಿದೆ. ಜಲಕಾಯದಲ್ಲಿ ಬೇಸಿಗೆ ಕಾಲದಲ್ಲೂ ತಳಮಟ್ಟದ ನೀರು ಇರುತ್ತದೆ. ಗ್ರಾಮದ ರೈತರು ಹಸುಕರುಗಳನ್ನು ದಡದಲ್ಲಿ ಮೇಯಿಸಿ ಮೈ ತೊಳೆಯುತ್ತಾರೆ. ಆದರೆ, ಕಳೆದ ಐದಾರು ತಿಂಗಳಿನಿಂದ ಕೆರೆ ಅಂಗಳಕ್ಕೆ ಕೆಲ ಕಿಡಿಗೇಡಿಗಳು ಮಧ್ಯರಾತ್ರಿಯಲ್ಲಿ ಲಾರಿಗಟ್ಟಲೇ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ’ ಎಂದು ಗ್ರಾಮದ ನಿವಾಸಿ ವಿಜಯ್ ಕುಮಾರ್ ಬೇಸರ
ವ್ಯಕ್ತಪಡಿಸಿದರು.
‘ಇದರಿಂದಾಗಿ ನೀರು ಕಲುಷಿತ ಗೊಂಡಿದೆ. ಲಾರಿ ಬಾರದಂತೆ ಕೆರೆಯ ಸುತ್ತ ಬೇಲಿ ಹಾಕಬೇಕು ಎಂದು ಅಧಿಕಾರಿಗಳಿಗೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಜಲಕಾಯವನ್ನು ಉಳಿಸಿಕೊಳ್ಳಲು ಅಧಿಕಾರಿಗಳು ಕಾಳಜಿ ತೋರಿಸುತ್ತಿಲ್ಲ’ ಎಂದು ಬ್ಯಾಲಕೆರೆ ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್ ದೂರಿದರು.
‘ಬ್ಯಾಲಕೆರೆ ಗ್ರಾಮದಲ್ಲಿ ಎರಡು ಕೆರೆಗಳಿದ್ದು ಒಂದು ಜಲಕಾಯವನ್ನು ಈಗ ಅಭಿವೃದ್ದಿಪಡಿಸಲಾಗುತ್ತಿದೆ. ಮತ್ತೊಂದು ಕೆರೆಯ ಮಣ್ಣು ಮತ್ತು ಮೂಲ ಸ್ವರೂಪ ಉಳಿಸಿಕೊಳ್ಳ
ಬೇಕಾಗಿದೆ. ಅಧಿಕಾರಿಗಳು ಪ್ರಭಾವಿಗಳ ಕೈಗೊಂಬೆಗಳಾಗಿ ವರ್ತಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.
ಕಸಘಟ್ಟಪುರ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವೆಂಕಟೇಶ್ ಪ್ರತಿಕ್ರಿಯಿಸಿ, ‘ಕೆರೆಗೆ ತ್ಯಾಜ್ಯವನ್ನು ಸುರಿಯುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.