ಬೆಂಗಳೂರು: ಕೊತ್ತನೂರು ಬಳಿಯ ದೊಡ್ಡಗುಬ್ಬಿ ಕೆರೆಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಮೂವರು ಬಾಲಕರ ಮೃತ ದೇಹಗಳು ಶುಕ್ರವಾರ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಅಂಬೇಡ್ಕರ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಸಾರಾಯಿಪಾಳ್ಯ ಫಾತಿಮಾ ಬಡಾವಣೆಯ ಇಮ್ರಾನ್ ಪಾಷಾ (17), ಮುಬಾರಕ್ (17) ಹಾಗೂ ಸಾಹಿಲ್ (15) ಮೃತರು. ಮೂವರು ಸ್ನೇಹಿತರ ಜೊತೆ ಈಜಾಡಲು ಗುರುವಾರ ಕೆರೆಗೆ ಹೋಗಿದ್ದರು. ಈಜಾಡಲು ಸಾಧ್ಯವಾಗದೇ ಕೆರೆಯಲ್ಲಿ ಮುಳುಗಿ ನಾಪತ್ತೆಯಾಗಿದ್ದರು.
‘ಮೃತರ ಜೊತೆಗಿದ್ದ ಸ್ನೇಹಿತರು ಹಾಗೂ ಪ್ರತ್ಯಕ್ಷದರ್ಶಿಗಳು ನೀಡಿದ್ದ ಹೇಳಿಕೆ ಆಧಾರದ ಮೇಲೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು. ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಮುಬಾರಕ್ ಹಾಗೂ ಸಾಹಿಲ್ ಮೃತ ದೇಹಗಳು ಸಿಕ್ಕಿದ್ದವು. ಸಂಜೆ ವೇಳೆಗೆ ಇಮ್ರಾನ್ ಪಾಷಾ ಮೃತದೇಹ ಪತ್ತೆಯಾಯಿತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಕೆಲ ದಿನಗಳ ಹಿಂದೆಯಷ್ಟೇ ಸ್ನೇಹಿತನೊಬ್ಬ ಕೆರೆಯಲ್ಲಿ ಈಜಾಡಿ, ಅದರ ವಿಡಿಯೊ ಮಾಡಿಕೊಂಡಿದ್ದ. ಅದನ್ನೇ ಇನ್ಸ್ಟಾಗ್ರಾಮ್ ಆ್ಯಪ್ನ ರೀಲ್ಸ್ನಲ್ಲಿ ಅಪ್ಲೋಡ್ ಮಾಡಿದ್ದ. ಅದನ್ನು ನೋಡಿದ್ದ ಬಾಲಕರು, ಸ್ನೇಹಿತರ ಜೊತೆ ಸೇರಿ ಕೆರೆಗೆ ಹೋಗಿದ್ದರು. ಬಾಲಕರ ಸಾವಿನ ಬಗ್ಗೆ ಯುಡಿಆರ್ (ಅಸಹಜ ಸಾವು) ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೂವರು ಬಾಲಕರಿಗೆ ಈಜಾಡಲು ಬರುತ್ತಿರಲಿಲ್ಲ. ಸ್ನೇಹಿತರೇ ಒತ್ತಾಯದಿಂದ ಅವರನ್ನು ಕೆರೆಗೆ ಕರೆದೊಯ್ದಿದ್ದರು. ಸ್ನೇಹಿತರು, ಪ್ರತ್ಯಕ್ಷದರ್ಶಿಗಳ ಲಿಖಿತ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದೂ ತಿಳಿಸಿದರು.
ಕುಟುಂಬಸ್ಥರ ಆಕ್ರಂದನ: ಬಾಲಕರ ಪತ್ತೆ ಕಾರ್ಯಾಚರಣೆ ನಡೆಯುವ ವೇಳೆಯಲ್ಲಿ ಕೆರೆ ದಡದಲ್ಲಿ ಕುಟುಂಬಸ್ಥರು, ಸಂಬಂಧಿಕರುಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಮೃತಪಟ್ಟ ಬಾಲಕರನ್ನು ನೆನೆದು ಕಣ್ಣೀರಿಡುತ್ತಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.