ADVERTISEMENT

ಮಹದೇವಪುರದ ಅಪಾರ್ಟ್‌ಮೆಂಟ್‌ ಫ್ಲ್ಯಾಟ್‌ನಲ್ಲಿ ನಾಯಿಯ ಕೊಳೆತ ಶವ: ವಾಮಾಚಾರ?

ಶ್ವಾನ ಬದುಕಲೆಂದು ಪೂಜೆ ಮಾಡುತ್ತಿದ್ದ ಮಹಿಳೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 16:19 IST
Last Updated 28 ಜೂನ್ 2025, 16:19 IST
<div class="paragraphs"><p>ಸಾಕುನಾಯಿ ಲ್ಯಾಬ್ರಡಾರ್ </p></div>

ಸಾಕುನಾಯಿ ಲ್ಯಾಬ್ರಡಾರ್

   

ಬೆಂಗಳೂರು: ಮಹದೇವಪುರದ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಮಹಿಳೆಯೊಬ್ಬರು ತಾನು ಸಾಕಿದ್ದ ಲ್ಯಾಬ್ರಡಾರ್ ರಿಟ್ರೈವರ್ ನಾಯಿಗೆ ಚಿತ್ರ ಹಿಂಸೆ ಕೊಟ್ಟು ಸಾಯಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬಿಬಿಎಂಪಿ ಪಶುವೈದ್ಯಾಧಿಕಾರಿ ಡಾ. ರುದ್ರೇಶ್ ಕುಮಾರ್ ಅವರ ದೂರಿನ ಮೇರೆಗೆ ಪಶ್ಚಿಮ ಬಂಗಾಳ ಮೂಲದ ತ್ರಿಪರ್ಣ ಪಾಯ್ಕಾ (38) ವಿರುದ್ಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮಹದೇವಪುರ ಚಿನ್ನಪ್ಪ ಲೇಔಟ್‌ನಲ್ಲಿರುವ ಅಕ್ಮೆ ಬೆಲ್ಲಾಟ್ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿರುವ ತ್ರಿಪರ್ಣ ಪಾಯ್ಕಾ, ನಾಲ್ಕು ನಾಯಿಗಳನ್ನು ಸಾಕಿದ್ದರು. 2-3 ದಿನಗಳ ಹಿಂದೆ  ಒಂದು ನಾಯಿ ಮೃತಪಟ್ಟಿದ್ದು, ಕೊಲೆ ಮಾಡಿರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ.

ADVERTISEMENT

‘ಫ್ಲ್ಯಾಟ್‌ನಿಂದ ದುರ್ವಾಸನೆ ಬರುತ್ತಿದ್ದ ಕಾರಣ, ಜೂನ್ 26ರಂದು ಸ್ಥಳೀಯರು ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದರು. ಬಿಬಿಎಂಪಿ ಅಧಿಕಾರಿಗಳು ಮತ್ತು ಪ್ರಾಣಿ ಪ್ರಿಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಕೊಠಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಗಂಡು ನಾಯಿ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆ ಬೆದರಿಸಿದ್ದಾಳೆ’ ಎಂದು ಪೊಲೀಸರು ತಿಳಿಸಿದ್ದಾರೆ.

ನಾಯಿಯ ಮೃತದೇಹವನ್ನು ಬಟ್ಟೆಯಲ್ಲಿ ಸುತ್ತಿಡಲಾಗಿತ್ತು. ಶ್ವಾನಗಳನ್ನು ಕೂಡಿ ಹಾಕಿದ್ದ ಕೊಠಡಿಯಲ್ಲಿ ಹಲವಾರು ದೇವತೆಗಳ ಚಿತ್ರಗಳು ಕಂಡ ಬಂತು. ವಾಮಾಚಾರ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

‘2021ರಲ್ಲಿ ತ್ರಿಪರ್ಣಾ ಆರಂಭಿಸಿದ್ದ ಖಾಸಗಿ ಕಂಪನಿಯಿಂದ ನಷ್ಟ ಉಂಟಾಗಿ, ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದರು. ಇದರಿಂದ ಮಾನಸಿಕವಾಗಿ ನೊಂದು ಫ್ಲ್ಯಾಟ್‌ನಲ್ಲಿ ಶ್ವಾನದೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದರು. ಜನಸಾಮಾನ್ಯರ ಜೊತೆ ಅಷ್ಟಾಗಿ ಸೇರುತ್ತಿರಲಿಲ್ಲ. ಪ್ರೀತಿಯಿಂದ ಸಾಕಿದ್ದ ಶ್ವಾನ ನಾಲ್ಕು ದಿನಗಳ ಹಿಂದೆ ಮೃತಪಟ್ಟಿತ್ತು. ಹೀಗಾಗಿ ತ್ರಿಪರ್ಣಾ ಅವರು‌‌ ಶ್ವಾನ ಬದುಕಲಿ ಎಂದು ದೇವರ ಫೋಟೊ ಇಟ್ಟು ಪೂಜೆ ಮಾಡುತ್ತಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಮೃತದೇಹ ಮರಣೋತ್ತರ ಪರೀಕ್ಷೆ ನಡೆಸಿದಾಗ ಕುತ್ತಿಗೆ ಹಾಗೂ ಭುಜದ ಭಾಗದಲ್ಲಿ ಬಲವಾದ ಪೆಟ್ಟುಬಿದ್ದು ಶ್ವಾನ ಮೃತಪಟ್ಟಿರುವುದಾಗಿ ವೈದ್ಯಾಧಿಕಾರಿಗಳು ವರದಿ ನೀಡಿದ್ಧಾರೆ. ಈ ವರದಿ ಆಧರಿಸಿ ಆರೋಪಿಗೆ ವಿಚಾರಣೆ ಬರುವಂತೆ ತ್ರಿಪರ್ಣಾಗೆ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.