ಚಿತ್ರದುರ್ಗ: ಗೆದ್ದ ಎತ್ತಿನ ಬಾಲ ಹಿಡಿದು ಪಕ್ಷಾಂತರ ಮಾಡುವ ಶಾಸಕರು ಮೂಢರು, ಅಯೋಗ್ಯರು ಹಾಗೂ ನೀಚರು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ತೀವ್ರ ತರಾಟೆಗೆ ತೆಗೆದುಕೊಂಡರು.
ಸಮೀಪದ ಸೀಬಾರದಲ್ಲಿ ಎಸ್.ನಿಜಲಿಂಗಪ್ಪ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪಕ್ಷ ಬದಲಿಸುವ ಶಾಸಕರಿಗೆ ಸರ್ಕಾರದ ಬಗ್ಗೆ, ಜನರ ಬಗ್ಗೆ ಕಾಳಜಿ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ನಿಷ್ಠೆಯನ್ನೂ ಹೊಂದಿಲ್ಲ. ತ್ಯಾಗ, ಬಲಿದಾನಗಳ ಮೂಲಕ ಗಳಿಸಿದ ಸ್ವಾತಂತ್ರ್ಯದ ಬಗ್ಗೆ ಗೌರವ ಕೂಡ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕಾಂಗ್ರೆಸ್ ಪಕ್ಷ ಕೂಡ ದಿವಾಳಿಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಆರೇಳು ಬಾರಿ ಗೆಲುವು ಸಾಧಿಸಿದವರನ್ನು ವ್ಯವಸ್ಥಿತವಾಗಿ ಸೋಲಿಸಲಾಗಿದೆ. ಇಂಥ ನಾಯಕರನ್ನು ಬಲಿ ಪಡೆಯುವ ಉದ್ದೇಶದಿಂದಲೇ ‘ಆ ಯಂತ್ರ’ವನ್ನು ಮತದಾನಕ್ಕೆ ಬಳಸಿಕೊಳ್ಳಲಾಗಿದೆ’ ಎಂದು ವಿದ್ಯುನ್ಮಾನ ಮತಯಂತ್ರ ಹೆಸರಿಸದೇ ಅನುಮಾನ ಹೊರಹಾಕಿದರು.
‘ಐದು ವರ್ಷಗಳ ಬಳಿಕ ಲೋಕಪಾಲ ಅಸ್ತಿತ್ವಕ್ಕೆ ತಂದಿರುವ ಪ್ರಧಾನಿ ನರೇಂದ್ರ ಮೋದಿ, ಬೆದರುಗೊಂಬೆಯೊಂದನ್ನು ಕೂರಿಸಿದ್ದಾರೆ. ಕ್ವಿಟ್ ಇಂಡಿಯಾ ಮಾದರಿಯಲ್ಲಿ ಮತ್ತೊಂದು ಹೋರಾಟದ ಅಗತ್ಯವಿದ್ದು, ಆ.14ರಂದು ರಾತ್ರಿ ಧ್ವಜಾರೋಹಣ ಮೂಲಕ ಚಾಲನೆ ನೀಡಲಿದ್ದೇವೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.