ಬೆಂಗಳೂರು: ಸಹಾಯಕ ನಿರ್ದೇಶಕ ಹುದ್ದೆಯಿಂದ 27 ಉಪನಿರ್ದೇಶಕ ಹುದ್ದೆಗಳಿಗೆ ಬಡ್ತಿ ನೀಡಲು ಮೂರು ಬಾರಿ ಇಲಾಖಾ ಪದೋನ್ನತಿ ಸಮಿತಿ (ಡಿಪಿಸಿ) ನಡೆಸುವ ಮೂಲಕ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ದಾಖಲೆ ಬರೆದಿದೆ!
ಮೊದಲ ಬಾರಿಯ ಡಿಪಿಸಿ ಸಭೆಯಲ್ಲಿ ಬಡ್ತಿಗೆ ಅನುಮೋದನೆ ನೀಡಿ ಸ್ಥಳ ನಿಯುಕ್ತಿಗೊಳಿಸಿದ ಕಡತಕ್ಕೆ ಇಲಾಖೆಯ ಹೊಣೆಯನ್ನೂ ಹೊಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಡಿ. 28ರಂದು ಒಪ್ಪಿಗೆ ನೀಡಿದ್ದಾರೆ. ಆದರೆ, ಅದನ್ನು ಜಾರಿಗೆ ತರಲು ಇಲಾಖೆ ಮುಂದಾಗಿಲ್ಲ.
ಅಷ್ಟೇ ಅಲ್ಲ, ಅದರ ಬದಲು, ಈ ಮತ್ತೆ, ಮತ್ತೆ ಡಿಪಿಸಿ ಸಭೆ ನಡೆಸಿ ಕಡತ ಮಂಡಿಸಲಾಗಿದೆ. ಇದು ಬಡ್ತಿ ನಿರೀಕ್ಷೆಯಲ್ಲಿರುವರ ಅಸಮಾಧಾನಕ್ಕೆ ಕಾರಣವಾಗಿದೆ.
ಇಲಾಖೆಯಲ್ಲಿ 35 ಉಪನಿರ್ದೇಶಕ ಹುದ್ದೆಗಳು ಖಾಲಿ ಇವೆ. ಅ.10ರಂದು ನಡೆದ ಮೊದಲ ಡಿಪಿಸಿ ಸಭೆಯಲ್ಲಿ 27 ಅಧಿಕಾರಿಗಳಿಗೆ ಉಪ ನಿರ್ದೇಶಕ ಹುದ್ದೆಗೆ ಬಡ್ತಿ ನೀಡಲು ನಿರ್ಧರಿಸಲಾಗಿತ್ತು. ಆದರೆ, ಈ ವೇಳೆ ರೋಸ್ಟರ್ ಪಾಲಿಸಿಲ್ಲವೆಂದು ದೂರು ಬಂದ ಹಿನ್ನೆಲೆಯಲ್ಲಿ ನ. 27ರಂದು ಮತ್ತೆ ಡಿಸಿಪಿ ಸಭೆ ನಡೆಸಲಾಗಿದೆ. ಆದರೆ, ಈ ಸಭೆಯಲ್ಲಿ 18 ಮಂದಿಗೆ ಬಡ್ತಿ ನೀಡಲು ಅನುಮೋದನೆ ನೀಡಿ ಈ ಹಿಂದೆ ಮಂಡಿಸಿದ್ದ ಕಡತದ ಮಾಹಿತಿ ಮುಚ್ಚಿಟ್ಟು, ಒಪ್ಪಿಗೆಗಾಗಿ ಮುಖ್ಯಮಂತ್ರಿಗೆ ಸಲ್ಲಿಸಲಾಗಿದೆ.
ಬಡ್ತಿಗೆ ಕೈಬಿಟ್ಟ ಅಧಿಕಾರಿಗಳು ಮಾಡಿದ ಮನವಿ ಹಿನ್ನೆಲೆಯಲ್ಲಿ ಡಿ. 27ರಂದು ಮತ್ತೊಮ್ಮೆ ಡಿಸಿಪಿ ಸಭೆ ನಡೆಸಲಾಗಿದೆ. ಈ ಬಾರಿ 10 ಮಂದಿಗೆ ಬಡ್ತಿ ನೀಡಲು ನಿರ್ಧರಿಸಲಾಗಿತ್ತು. ಈ ಮಧ್ಯೆ, ಈ ಡಿಪಿಸಿ ಸಭೆಯ ನಡಾವಳಿಯನ್ನೇ ತಿದ್ದಿ, ‘ಸದ್ಯ, ಯಾರಿಗೂ ಬಡ್ತಿ ನೀಡಲು ಅವಕಾಶವಿಲ್ಲ. ಆರು ಅಧಿಕಾರಿಗಳಿಗೆ ಬಡ್ತಿ ಕೊಡಲು ಸಭೆ ನಡೆಸಬಹುದಾದರೂ, ಮುಂದೆ ಖಾಲಿಯಾಗುವ ಹುದ್ದೆಗಳಿಗೆ ನೇಮಿಸಬಹುದು’ ನಮೂದಿಸಿ ಗೊಂದಲ ಸೃಷ್ಟಿಸಲಾಗಿದೆ. ಸಭೆಯಲ್ಲಿ ತೆಗೆದುಕೊಂಡಿದ್ದ ತೀರ್ಮಾನಕ್ಕೆ ತದ್ವಿರುದ್ಧವಾಗಿ ನಡಾವಳಿಯಲ್ಲಿ ದಾಖಲಿಸಿರುವುದು ಅಧಿಕಾರಿಗಳನ್ನು ರೊಚ್ವಿಗೆಬ್ಬಿಸಿದೆ.
‘ಈಗಾಗಲೇ ಮೊದಲ ಡಿಪಿಸಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದ ಕಡತಕ್ಕೆ ಮುಖ್ಯಮಂತ್ರಿ ಅನುಮೋದನೆ ನೀಡಿದ್ದಾರೆ. ಈ ಕಡತಕ್ಕೆ ಯಾವುದೇ ಬೆಲೆ ಇಲ್ಲವೆಂಬಂತೆ ಇಲಾಖೆ ಹಿರಿಯ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಅಲ್ಲದೆ,ಒಂದೇ ಉದ್ದೇಶಕ್ಕೆ ಮೂರು ಬಾರಿ ಮುಖ್ಯಮಂತ್ರಿಗೆ ಕಡತ ಮಂಡಿಸಿರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ನಿದರ್ಶನವಾಗಿದೆ’ ಎಂದೂ ಕೆಲವು ಅಧಿಕಾರಿಗಳು ದೂರಿದ್ದಾರೆ. ಪ್ರತಿಕ್ರಿಯೆ ಪಡೆಯಲು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಂಪರ್ಕಕ್ಕೆ ಸಿಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.