ಬೆಂಗಳೂರು: ‘ಡಾ.ರಾಜ್ಕುಮಾರ್ ಮೇರುವ್ಯಕ್ತಿತ್ವದ ನಟ. ಅವರಲ್ಲಿದ್ದ ವಿನಮ್ರತೆಯ ಗುಣವನ್ನು ನಾವೆಲ್ಲಾ ಮೈಗೂಡಿಸಿಕೊಳ್ಳಬೇಕು. ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಅವರಿಗಿದ್ದ ಅಭಿಮಾನವು ಅನುಪಮ ಮತ್ತು ಅನುಕರಣೀಯ’ ಎಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಆರೂಢಭಾರತೀ ಸ್ವಾಮೀಜಿ ಹೇಳಿದರು.
ಅಖಂಡ ಕರ್ನಾಟಕ ಜನಜಾಗೃತಿ ವೇದಿಕೆಯುಕೆಂಗೇರಿ ಉಪನಗರದಲ್ಲಿ ಶನಿವಾರ ಏರ್ಪಡಿಸಿದ್ದ ಡಾ. ರಾಜ್ಕುಮಾರ್ ಅವರ 92ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಭಿನಯದಲ್ಲಿ ರಾಜ್ ಅವರಿಗೆ ಯಾರೂ ಸಾಟಿಯಾಗಲಾರರು. ಅವರ ಮಾತುಗಾರಿಕೆ ಹಾಗೂ ಹಾಡುಗಾರಿಕೆಗೆ ಮಾರುಹೋಗದವರೇ ಇಲ್ಲ. ಇವು ಅವರಿಗೆ ದೈವದತ್ತವಾಗಿ ಸಿದ್ಧಿಸಿದ್ದವು. ರಾಜ್ ಅವರಲ್ಲಿದ್ದ ವಿದ್ವತ್ತು ಅಸಾಧಾರಣ. ಹೀಗಾಗಿಯೇ ದಾದಾಸಾಹೇಬ್ ಫಾಲ್ಕೆ, ಪದ್ಮಭೂಷಣ, ಕರ್ನಾಟಕ ರತ್ನ, ವರನಟ, ನಟಸಾರ್ವಭೌಮ, ರಸಿಕರ ರಾಜ ಹೀಗೆ ಅನೇಕ ಪ್ರಶಸ್ತಿ ಮತ್ತು ಬಿರುದುಗಳು ಅವರನ್ನು ಅರಸಿ ಬಂದಿದ್ದವು’ ಎಂದು ತಿಳಿಸಿದರು.
ಅಖಂಡ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಸುರೇಶ ಗೌಡ, ಉಪಾಧ್ಯಕ್ಷ ಜಗದೀಶ್, ಪ್ರಧಾನ ಕಾರ್ಯದರ್ಶಿ ಸುರೇಶ್, ಕಾರ್ಯದರ್ಶಿ ಅನಿಲ್, ಇಂದ್ರಸುಧಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.