ADVERTISEMENT

ನೇಮಕಾತಿಗೆ ಕರಡು ನಿಯಮಗಳ ಪ್ರಕಟ

ಪ್ರಾಂಶುಪಾಲರು, ಸಹಾಯಕ ಪ್ರಾಧ್ಯಾಪಕರ ಹುದ್ದೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 17:25 IST
Last Updated 11 ಫೆಬ್ರುವರಿ 2020, 17:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿನ 310ಪ್ರಾಂಶುಪಾಲರು ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಾಗಿ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಮಾರ್ಗಸೂಚಿಯಂತೆ ಸರ್ಕಾರ ಮಂಗಳವಾರ ಕರಡು ನಿಯಮಗಳನ್ನು ರೂಪಿಸಿ ಗೆಜೆಟ್‌ನಲ್ಲಿ ಪ್ರಕಟಿಸಿದೆ.

ಸಹಾಯಕ ಪ್ರಾಧ್ಯಾಪಕರನ್ನು ನೇಮಕ ಮಾಡುವಾಗ ಸಂಬಂಧಪಟ್ಟ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕು, ಅದರಲ್ಲಿ ತಲಾ 100 ಅಂಕದ ಕನ್ನಡ ಮತ್ತು ಇಂಗ್ಲಿಷ್‌ ಭಾಷಾ ಸಾಮರ್ಥ್ಯ ಅಳೆಯುವ ಪ್ರಶ್ನೆಪತ್ರಿಕೆಗಳು ಕಡ್ಡಾಯವಾಗಿದ್ದು, 50 ಅಂಕದ ಸಾಮಾನ್ಯ ಜ್ಞಾನ ಹಾಗೂ 150 ಅಂಕದ ಐಚ್ಛಿಕ ವಿಷಯಗಳ ಪ್ರಶ್ನೆಪತ್ರಿಕೆಯೂ ಇರಬೇಕು ಎಂದು ಸೂಚಿಸಲಾಗಿದೆ.

ಪ್ರಾಂಶುಪಾಲರನ್ನು ನೇಮಕ ಮಾಡುವುದಕ್ಕೆಪಿಎಚ್‌.ಡಿ. ಅರ್ಹತೆಯಲ್ಲದೆ, 15 ವರ್ಷಗಳ ಬೋಧನಾ ಅನುಭವ, ಕನಿಷ್ಠ 10 ಸಂಶೋಧನಾ ಪ್ರಬಂಧಗಳನ್ನು ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಪ್ರಕಟಿಸಿದ ಮಾನದಂಡ ಸೂಚಿಸಲಾಗಿದೆ. ಎರಡು ಗಂಟೆಗಳ ಸ್ಪರ್ಧಾತ್ಮಕ ಪರೀಕ್ಷೆಯೂ ಇದೆ.

ADVERTISEMENT

ಆಕ್ಷೇಪಗಳಿದ್ದಲ್ಲಿ,15 ದಿನಗಳ ಒಳಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ, ಬಹುಮಹಡಿ ಕಟ್ಟಡ, ಬೆಂಗಳೂರು–1 ಇಲ್ಲಿಗೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

‘ಕರಡು ನಿಮಯಗಳಲ್ಲಿಕನ್ನಡ ಭಾಷೆ ಕಡ್ಡಾಯಗೊಳಿಸಿರುವುದರಿಂದ ಇತರ ರಾಜ್ಯದವರು ಹುದ್ದೆ ಪಡೆಯುವ ಅವಕಾಶ ಕಡಿಮೆ. ಸರ್ಕಾರ ಶೀಘ್ರ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು’ ಎಂದು ಪದವಿ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಟಿ.ಎಂ.ಮಂಜುನಾಥ್‌ ಪ್ರತಿಕ್ರಿಯಿಸಿದ್ದಾರೆ.

‘ಮರೆತೇ ಹೋಗಿದೆ 1,242 ಹುದ್ದೆ ಭರ್ತಿ’ ಎಂಬ ಶೀರ್ಷಿಕೆಯಡಿ ಜನವರಿ 30ರಂದು ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.