ಬೆಂಗಳೂರು: ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿಆರ್ಡಿಒ) ಸಹಾಯಕ ಆಡಳಿತಗಾರ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ವಂಚನೆಗೀಡಾದ ಬಿಇಎನ್ ಲೇಔಟ್ ನಿವಾಸಿ ಗಣೇಶ್ ಗೌಡ ಎಂಬುವರು ದೂರು ಕೊಟ್ಟಿದ್ದಾರೆ. ಆರೋಪಿ ಮುರಳಿಗೌಡ ಎಂಬಾತನ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ದೂರುದಾರ ಗಣೇಶ್, ಜೆರಾಕ್ಸ್ ಅಂಗಡಿ ಇಟ್ಟುಕೊಂಡಿದ್ದಾರೆ. ಸರ್ಕಾರಿ ನೌಕರಿಗಾಗಿ ಅರ್ಜಿ ಸಲ್ಲಿಸಿದ್ದರು. ಅಂಗಡಿಗೆ ಬಂದಿದ್ದ ಮುರಳಿಗೌಡ, ತಾನು ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿರುವುದಾಗಿ ಹೇಳಿ ಪರಿಚಯಿಸಿಕೊಂಡಿದ್ದ. ‘ಡಿಆರ್ಡಿಒ ಸಂಸ್ಥೆಯಲ್ಲಿ ಸಹಾಯಕ ಆಡಳಿತಗಾರ ಹುದ್ದೆ ಖಾಲಿ ಇದೆ. ₹ 6 ಲಕ್ಷ ಖರ್ಚು ಮಾಡಿದರೆ ಹುದ್ದೆ ಕೊಡಿಸುತ್ತೇನೆ’ ಎಂದು ಆರೋಪಿ ಹೇಳಿದ್ದ. ಅದನ್ನು ನಂಬಿದ್ದ ದೂರುದಾರ, ₹ 3 ಲಕ್ಷ ಮುಂಗಡವಾಗಿ ನೀಡಿದ್ದರು. ಈ ಸಂಗತಿ ದೂರಿನಲ್ಲಿದೆ.’
‘ಹಣ ಪಡೆದರೂ ಆರೋಪಿ ಕೆಲಸ ಕೊಡಿಸಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿ ಆರೋಪಿ ನಾಪತ್ತೆಯಾಗಿದ್ದಾನೆ’ ಎಂದೂ ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.