ADVERTISEMENT

ಮದ್ಯದ ಅಮಲಿನಲ್ಲಿ 3 ದಿನ, ನಾಲ್ಕು ಕೊಲೆ

​ಪ್ರಜಾವಾಣಿ ವಾರ್ತೆ
Published 6 ಮೇ 2020, 20:24 IST
Last Updated 6 ಮೇ 2020, 20:24 IST
   

ಬೆಂಗಳೂರು: ನಗರದಲ್ಲಿ ಮದ್ಯ ಮಾರಾಟ ಆರಂಭವಾದ ಬೆನ್ನಲ್ಲೇ, ಕೊಲೆ ಪ್ರಕರಣಗಳು ಹೆಚ್ಚಿದ್ದು, ಮೂರು ದಿನಗಳಲ್ಲಿ ಕುಡಿದ ನಶೆಯಲ್ಲಿ ನಾಲ್ಕು ಕೊಲೆ ಹಾಗೂ ಒಂದು ಕೊಲೆ ಯತ್ನ ಪ್ರಕರಣಗಳು ನಡೆದಿವೆ.

ಈ ‍ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್, ಎಲ್ಲ ಪ್ರಕರಣಗಳ ಬಗ್ಗೆ ಸಮರ್ಪಕವಾಗಿ ತನಿಖೆ ನಡೆಸುವಂತೆ ಮತ್ತು ರೌಡಿಗಳನ್ನು ಮಟ್ಟ ಹಾಕಲು ಕ್ರಮ ತೆಗೆದುಕೊಳ್ಳುವಂತೆ ಎಲ್ಲ ಡಿಸಿಪಿಗಳಿಗೆ ಸೂಚಿಸಿದ್ದಾರೆ.

ಈ ಮಧ್ಯೆ, ಆಯಾ ಠಾಣೆಗಳ ವ್ಯಾಪ್ತಿಯ ರೌಡಿಶೀಟರ್‌ಗಳ ಪಟ್ಟಿಯನ್ನು ಪೊಲೀಸರುಸಿದ್ಧಪಡಿಸಿದ್ದಾರೆ. ಈಗಾಗಲೇ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ತೀವ್ರ ಶೋಧ ಆರಂಭಿಸಿದ್ದಾರೆ.

ADVERTISEMENT

ಮದ್ಯ ಮಾರಾಟ ಆರಂಭಗೊಂಡ ಬಳಿಕ ನಡೆದ ಕೊಲೆ ಪ್ರಕರಣ: ಕುಡಿದ ಮತ್ತಿನಲ್ಲಿ ಕಾಮಾಕ್ಷಿಪಾಳ್ಯದಲ್ಲಿ ನಡೆದ ಜಗಳದಲ್ಲಿ ಪುರುಷೋತ್ತಮ್ ಎಂಬಾತನ ಹತ್ಯೆ ನಡೆದಿದೆ. ಜೀವನ್‌ಬಿಮಾನಗರ ಮದ್ಯದ ಅಮಲಿನಲ್ಲಿ ಸ್ನೇಹಿತರಿಬ್ಬರ ನಡುವೆ ಹೊಡೆದಾಟ ನಡೆದು ಗಣಪತಿ ಕಾಲೊನಿಯ ಶ್ರೀನಿವಾಸ್ (42) ಎಂಬಾತನ ಕೊಲೆ ನಡೆದಿತ್ತು.

ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ರೌಡಿ ಬುಜ್ಜಿ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ದೇವರಜೀವನಹಳ್ಳಿಯಲ್ಲಿ ಗಾಂಜಾ ಮತ್ತಿನಲ್ಲಿ ಅರ್ಬಾಜ್ ಎಂಬಾತ ನವಾಜ್‌ ಎಂಬುವನಿಗೆ ಚೂರಿಯಿಂದ ಇರಿದುಪರಾರಿಯಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.