ಕರ್ನಾಟಕ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಪರಿಶಿಷ್ಟ ಜಾತಿ ಒಳ ಮೀಸಲಾತಿ ಆಯೋಗದ ಅಧ್ಯಕ್ಷ ಎಚ್.ಎನ್. ನಾಗಮೋಹನ್ದಾಸ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಬೆಂಗಳೂರು: ‘ಒಳ ಮೀಸಲಾತಿಯಲ್ಲಿ ಯಾರಿಗೂ ಅನ್ಯಾಯವಾಗುವುದಿಲ್ಲ. ಒಳ ಮೀಸಲಾತಿ ಹಂಚಿಕೆ ಕುರಿತು ಸರ್ಕಾರಕ್ಕೆ ಶೀಘ್ರವೇ ವರದಿ ಸಲ್ಲಿಸಲಾಗುತ್ತದೆ’ ಎಂದು ಪರಿಶಿಷ್ಟ ಜಾತಿ ಒಳ ಮೀಸಲಾತಿ ಆಯೋಗದ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ದಾಸ್ ಹೇಳಿದರು.
ಕರ್ನಾಟಕ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಗುರುವಾರ ಹಮ್ಮಿಕೊಂಡಿದ್ದ, ‘ನ್ಯಾಯಮೂರ್ತಿ ನಾಗಮೋಹನ್ದಾಸ್ ಅವರಿಗೆ ಮನವಿ ಸಲ್ಲಿಸುವ ಮಾದಿಗ ಸಂಬಂಧಿತ ಜಾತಿಗಳ ಸಮನ್ವಯ ಸಭೆ’ಯಲ್ಲಿ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
‘ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿಯ ಅಗತ್ಯವಿದೆ. ಅದು ಬೇಕೋ ಬೇಡವೋ ಎಂಬ ಚರ್ಚೆ ಅನಗತ್ಯ. ಸುಪ್ರೀಂ ಕೋರ್ಟ್ ಅದರ ಅಗತ್ಯವನ್ನು ಹೇಳಿದ್ದು, ಸಾಮಾಜಿಕ, ರಾಜಕೀಯ, ಔದ್ಯೋಗಿಕವಾಗಿ ವರ್ಗೀಕರಣ ಮಾಡಿ ಮೀಸಲಾತಿ ಹಂಚಿಕೆ ಮಾಡಿ ಎಂದು ಹೇಳಿದೆ. ಆದ್ದರಿಂದ, ಒಳ ಮೀಸಲಾತಿಯನ್ನು ಹೇಗೆ ಕೊಡಬೇಕು? ಯಾರಿಗೆ ಎಷ್ಟು ಕೊಡಬೇಕು ಎಂಬ ಬಗ್ಗೆ ನಿರ್ಧಾರವಾಗಬೇಕಿದೆ’ ಎಂದರು.
‘ಕೆಲವು ಸಮುದಾಯದವರು ಮೀಸಲಾತಿಯನ್ನು ಪಡೆದುಕೊಂಡು ಉನ್ನತಮಟ್ಟಕ್ಕೆ ಹೋಗಿದ್ದಾರೆ. ಕೆಲವರು ಇನ್ನೂ ಕೆಳ ಸ್ತರದಲ್ಲೇ ಇದ್ದಾರೆ. ಅವರು ಮತ್ತು ಇವರ ಮಧ್ಯೆ ಸಂಘರ್ಷವಾಗದಂತೆ ಮೀಸಲಾತಿ ನೀಡಬೇಕು. ಎಲ್ಲರೂ ಸಹೋದರತ್ವ ಭಾವದಿಂದ ಇದನ್ನು ನೋಡಬೇಕು’ ಎಂದು ಹೇಳಿದರು.
‘ಉಳ್ಳವರಿಗೆ ಸೌಲಭ್ಯ ತಡವಾದರೆ ಸಮಸ್ಯೆಯಾಗುವುದಿಲ್ಲ, ಹಸಿದವರಿಗೆ ಏನೂ ಸಿಗದಿದ್ದರೆ ಸಾಯುತ್ತಾರೆ. ಇದನ್ನೆಲ್ಲ ಪರಿಗಣಿಸಿ ಆಯೋಗ ಸಲಹೆಗಳನ್ನು ನೀಡುತ್ತದೆ. ನೀವೆಲ್ಲ ನೀಡಿರುವ ಸಲಹೆ, ಮನವಿಗಳನ್ನು ಪರಿಶೀಲಿಸಿ, ಹಲವು ವಿಷಯಗಳನ್ನು ಮಾರ್ಗಸೂಚಿಯಾಗಿಸಲಿದ್ದೇವೆ’ ಎಂದರು.
ಮಚ್ಚಿಗ, ಡೋರ್, ದಕ್ಕಲಿಗ ಸಮುದಾಯದ ಮುಖಂಡರು ಮಾತನಾಡಿ, ‘ನಮ್ಮ ಸಮುದಾಯವು ಮಾದಿಗ ಸಮುದಾಯವನ್ನು ಅಣ್ಣ ಎಂದು ಒಪ್ಪಿಕೊಂಡಿದೆ. ಅವರೊಂದಿಗೆ ನಾವಿರುತ್ತೇವೆ’ ಎಂದು ಹೇಳಿದರು.
‘ಆಳುವ ವರ್ಗ ದಿಕ್ಕು ತಪ್ಪಿಸುತ್ತದೆ...
’ ‘ಮೀಸಲಾತಿ ಎಂಬುದು ಶಾಶ್ವತ ಪರಿಹಾರ ಅಲ್ಲ. 100 ಉದ್ಯೋಗಾವಕಾಶಗಳಲ್ಲಿ 98 ಖಾಸಗಿ ಸಂಸ್ಥೆಗಳಲ್ಲಿರುತ್ತವೆ. ಅಲ್ಲಿ ಮೀಸಲಾತಿ ಇಲ್ಲ. ಸರ್ಕಾರಿ ವಲಯದಲ್ಲಿ ಮಂಜೂರಾದ ಒಟ್ಟು ಹುದ್ದೆಗಳ ಪೈಕಿ 2.74 ಲಕ್ಷ ಹುದ್ದೆ ಖಾಲಿ ಇವೆ. ಅವರು ನೇಮಕವನ್ನೇ ಮಾಡಿಕೊಳ್ಳದಿದ್ದರೆ ಮೀಸಲಾತಿ ಇರುವುದರಿಂದ ಪ್ರಯೋಜನವೇನು? ಆಳುವ ವರ್ಗ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತದೆ. ಅವರ ಬಗ್ಗೆ ಚರ್ಚಿಸಿ ಚಿಂತಿಸಿ ನಮ್ಮ ಮಾರ್ಗವನ್ನು ಕಂಡುಕೊಳ್ಳಬೇಕು’ ಎಂದು ನಾಗಮೋಹನ್ದಾಸ್ ಕಿವಿಮಾತು ಹೇಳಿದರು. ‘ಆಯೋಗ ರಚನೆಯಾದ ಒಂದೂವರೆ ತಿಂಗಳಲ್ಲಿ 2500ಕ್ಕೂ ಹೆಚ್ಚು ಮನವಿಗಳು ಸಲ್ಲಿಕೆಯಾಗಿವೆ. ಎರಡು ಸಾವಿರಕ್ಕೂ ಹೆಚ್ಚು ಮಂದಿಯೊಂದಿಗೆ ಚರ್ಚೆ ನಡೆಸಿದ್ದೇನೆ. ನಿಮ್ಮ ಎಲ್ಲ ಸಲಹೆ ಮನವಿಗಳನ್ನು ಕಿವಿಯಿಂದಲ್ಲ ಹೃದಯದಿಂದ ಆಲಿಸಿದ್ದೇನೆ. ನಿಮ್ಮ ನೋವು ಕಷ್ಟದ ಅರಿವು ನನಗಿದೆ’ ಎಂದರು.
ಸಾಮಾಜಿಕ ನ್ಯಾಯ ಕೊಡಿಸಿ: ಆಂಜನೇಯ
‘ಅನ್ಯಾಯಕ್ಕೆ ಒಳಗಾದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡಿಸಬೇಕು’ ಎಂದು ಮಾಜಿ ಸಚಿವ ಎಚ್. ಆಂಜನೇಯ ಮನವಿ ಮಾಡಿದರು. ಮಾದಿಗ ಸಮುದಾಯದಲ್ಲಿ ಸಮಗಾರ ಚಮ್ಮಾರ ಮೋಚಿ ಡೋರ್ ದಕ್ಕಲಿಗ ಸೇರಿದಂತೆ 45ಕ್ಕೂ ಹೆಚ್ಚು ಒಳ ಪಂಗಡಗಳಿವೆ. ಅವರನ್ನೆಲ್ಲ ಮಾದಿಗ ಸಮುದಾಯದೊಂದಿಗೇ ಪರಿಗಣಿಸಬೇಕು. ಆದಿ ಜಾಂಬವ ಆದಿ ದ್ರಾವಿಡ ಆದಿ ಆಂಧ್ರ ಎಂದು ದಾಖಲಿಸದೆ ನಿರ್ದಿಷ್ಟ ಪಂಗಡದ ಹೆಸರನ್ನೇ ನಮೂದಿಸಬೇಕು’ ಎಂದು ಕೋರಿದರು.
‘ಕುಟುಂಬದ ಆರ್ಥಿಕ ಸ್ಥಿತಿ ಮಾನದಂಡವಾಗಲಿ’
ಮಂಗಳೂರು: ‘ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಕುಟುಂಬದ ಆರ್ಥಿಕ ಸ್ಥಿತಿಗತಿ ಅಥವಾ ವಾರ್ಷಿಕ ಆದಾಯ ಮಾನದಂಡ ಆಗಬೇಕೇ ಹೊರತು, ಜಾತಿ ನೆಲೆಗಟ್ಟು ಅಲ್ಲ’ ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟ
ಹೇಳಿದೆ.
ಈ ಕುರಿತು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ, ‘ಪರಿಶಿಷ್ಟ ಜಾತಿಗಳನ್ನು ನ್ಯಾಯೋಚಿತವಾಗಿ ವರ್ಗೀಕರಿಸ
ಬೇಕು. ಇದಕ್ಕಾಗಿ ಮಾನದಂಡ ರೂಪಿಸಬೇಕು. ಇದು ಕೆನೆಪದರ ನೀತಿಗಿಂತ ಭಿನ್ನವಾಗಿರಬೇಕು’ ಎಂದು ಒತ್ತಾಯಿಸಿದರು.
‘2023ರಲ್ಲಿ ಆಗಿನ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದ ಸಂಪುಟದ ಉಪಸಮಿತಿಯ 101 ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಿತ್ತು. ಒಂದನೇ ಗುಂಪಿನ ನಾಲ್ಕು ಜಾತಿಗಳಿಗೆ ಶೇ 6, ಎರಡನೇ ಗುಂಪಿನ ನಾಲ್ಕು ಜಾತಿಗಳಿಗೆ ಶೇ 5.5, ಮೂರನೇ ಗುಂಪಿನ 4 ಜಾತಿಗಳಿಗೆ ಶೇ 4.5 ರಷ್ಟು, ಇನ್ನುಳಿದ 89 ಸಣ್ಣ ಪುಟ್ಟ ಜಾತಿಗಳಿಗೆ ಕೇವಲ ಶೇ 1ರಷ್ಟು ಮೀಸಲಾತಿ ನಿಗದಿ
ಪಡಿಸಿತ್ತು. ಈ ಅವೈಜ್ಞಾನಿಕ ಶಿಫಾರಸನ್ನು ಆಯೋಗವು ತಿರಸ್ಕರಿಸಬೇಕು’ ಎಂದು ಮನವಿ ಮಾಡಿದರು.
‘ಸುಪ್ರೀಂ ಕೋರ್ಟ್ನ ಏಳು ಸದಸ್ಯರ ಪೀಠದ ತೀರ್ಪಿನಂತೆ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ಅವುಗಳ ಸಾಮಾಜಿಕ - ಆರ್ಥಿಕ ಪರಿಸ್ಥಿತಿಯ ಅಧಿಕೃತ ದತ್ತಾಂಶ ಅತ್ಯಗತ್ಯ. ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಅಪ್ರಸ್ತುತ ಎಂದು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅದನ್ನು ತಿರಸ್ಕರಿಸಿತ್ತು. ಎಚ್. ಕಾಂತರಾಜ್ ನೇತೃತ್ವದ ಮತ್ತು ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ರಾಜ್ಯ ಹಿಂದುಳಿದ ವರ್ಗಗಳ ಆಯೋಗಗಳ ವರದಿಯನ್ನು ರಾಜ್ಯ ಸರ್ಕಾರ ಇನ್ನೂ ಅಂಗೀಕರಿಸಿಲ್ಲ. ನ್ಯಾ.ನಾಗಮೋಹನದಾಸ್ ಆಯೋಗದ ಬಳಿ ಪರಿಶಿಷ್ಟ ಜಾತಿಗಳ ನಿಖರ ದತ್ತಾಂಶವಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.