ಬೆಂಗಳೂರು: ಬೆಂಗಳೂರಿನ ಮುಸ್ಲಿಂ ಯುವಕರು ಕೊರೊನಾ ಸಂಕಷ್ಟದ ಸಂದರ್ಭದಲ್ಲಿ 5 ಸಾವಿರಕ್ಕೂ ಅಧಿಕ ಮಂದಿಗೆ ಬಿರಿಯಾನಿ ಹಂಚುವ ಮೂಲಕ ಈದ್ ಉಲ್ ಫಿತ್ರ್ ಹಬ್ಬವನ್ನು ಆಚರಿಸಿದ್ದಾರೆ.
ಮುಸ್ಲಿಂ ಯುವಕರಾದ ಹಫೀಜ್ ಸೇಠ್, ಉಸ್ಮಾನ್ ಷರೀಫ್, ಇಬ್ರಾಹಿಂ ಅಕ್ರಂ ಹಾಗೂ ಇತರ ಸ್ವಯಂಸೇವಕರು ಸೇರಿ ಕರೋಲ್ ಫೌಂಡೇಷನ್ ಆಶ್ರಯದಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಕೊರೊನಾ ಯೋಧರಿಗೆ ಹಾಗೂ ಬಡವರಿಗೆ ಬಿರಿಯಾನಿ ಹಾಗೂ ಹಣ್ಣಿನ ರಸದ ಪೊಟ್ಟಣಗಳನ್ನು ಜಾತಿ, ಧರ್ಮದ ಭೇದ ಮಾಡದೇ ಹಂಚಿದರು.
‘ಕೋವಿಡ್ ಯೋಧರು, ಈ ಸೋಂಕು ನಿಯಂತ್ರಣ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಪೊಲೀಸರು, ಬಿಬಿಎಂಪಿ ನೌಕರರು, ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿ ಹಾಗೂ ವಲಸೆ ಕಾರ್ಮಿಕರಿಗೆ ಬಿರಿಯಾನಿ ಹಂಚುವ ಮೂಲಕ ಹಬ್ಬ ಆಚರಿಸಿದ್ದೇವೆ. ದೇಶದ ಏಕತೆ, ಕೋಮು ಸಾಮರಸ್ಯ ಮತ್ತು ಜಾತ್ಯತೀತತೆ ಎತ್ತಿ ಹಿಡಿಯುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅವಕಾಶ ವಂಚಿತರಿಗೆ ಹಾಗೂ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಖುಷಿಯನ್ನೆಲ್ಲ ಮರೆತು ಇತರರ ಸೇವೆಗಾಗಿ ಪಣ ತೊಟ್ಟವರಿಗೂ ಹಬ್ಬದ ಖುಷಿ ಸಿಗಬೇಕು ಎಂಬುದು ನಮ್ಮ ಆಶಯ’ ಎಂದು ಉಸ್ಮಾನ್ ಷರೀಫ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.