ADVERTISEMENT

ಲೋಕಸಭೆ ಫಲಿತಾಂಶ ಜನ ಏನನ್ನುತ್ತಾರೆ?

​ಪ್ರಜಾವಾಣಿ ವಾರ್ತೆ
Published 23 ಮೇ 2019, 20:06 IST
Last Updated 23 ಮೇ 2019, 20:06 IST
   

ದೇಶದಲ್ಲಿ ಭಾರಿ ನೀರಿಕ್ಷೆ ಹಟ್ಟಿಸಿದ್ದ ಲೋಕಸಭಾ ಚುನಾವಣೆ ಫಲಿತಾಂಶ ಗುರುವಾರ (ಮೇ 23) ಪ್ರಕಟವಾಗಿದೆ. ಮೋದಿ ಬರ್ತಾರ, ರಾಹುಲ್‌ ಇರ್ತಾರ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಾಗಿದೆ. ಫಲಿತಾಂಶದ ಕುರಿತು ಜನರು ಏನೆಲ್ಲ ಮಾತನಾಡಿದ್ದಾರೆ.. ನೀವೇ ಓದಿ.

***

ಚುನಾವಣೋತ್ತರ ಸಮೀಕ್ಷೆ ನಿಜವಾಗಿದೆ. ದೇಶದ ಜನತೆಯ ನಾಡಿಮಿಡಿತ ಅರಿತುಕೊಳ್ಳುವಲ್ಲಿ ಮೋದಿ ಅವರು ಯಶಸ್ವಿಯಾಗಿದ್ದಾರೆ.ಈ ಬಾರಿ ಸಹಜವಾಗಿಯೇ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದೇವೆ. ಅದೇ ರೀತಿ, ದೇಶವನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತಾರೆ ಎಂಬ ವಿಶ್ವಾಸವಿದೆ.

ADVERTISEMENT

–ಎ.ಎನ್. ಲಾಲ್, ಬೆಂಗಳೂರು

ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ ಕಾರಣ ಎನ್‌ಡಿಎ ಅಧಿಕ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ. ಯುಪಿಎ ಮೈತ್ರಿಕೂಟ ಎರಡನೇ ಅವಧಿಯಲ್ಲಿ ಹಲವು ಹಗರಣಗಳಲ್ಲಿ ಸಿಲುಕಿಕೊಂಡಿತು. ಇದರಿಂದಾಗಿ ಕಾಂಗ್ರೆಸ್ ಪಕ್ಷವನ್ನು ಜನತೆ ತಿರಸ್ಕರಿಸಿದ್ದರು. ಮೋದಿ ಅವರ ನಾಯಕತ್ವ ಕೂಡ ಈ ಗೆಲುವಿನ ಹಿಂದೆ ಕೆಲಸ ಮಾಡಿದೆ.

–ಅರುಣ ಕುಮಾರ್, ಕೋಲಾರ

ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸರ್ಕಾರ ಕಳೆದ ಬಾರಿ ನೀಡಿದ್ದ ಕೆಲ ಭರವಸೆಗಳನ್ನು ಹುಸಿಗೊಳಿಸಿತ್ತು. ನಿರುದ್ಯೋಗ, ಬಡತನ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕಾದ ಸವಾಲಿದೆ. ಪಾರದರ್ಶಕ ಆಡಳಿತದಿಂದ ಎನ್‌ಡಿಎಗೆ ಅಧಿಕ ಸ್ಥಾನ ಬಂದಿದೆ.

–ಸುಮೇಶ್, ಬೆಂಗಳೂರು

ಮೋದಿ ಅವರ ಪ್ರಬಲ ನಾಯಕತ್ವದಿಂದ ಭಯೋತ್ಪಾದಕರ ವಿರುದ್ಧ ಸಮರ ಸಾರಲು ಸಾಧ್ಯವಾಯಿತು. ವಿಪಕ್ಷಗಳಲ್ಲಿ ಇಂತಹ ಗಟ್ಟಿ ನಿರ್ಧಾರ ಕೈಗೊಳ್ಳುವ ನಾಯಕರಿಲ್ಲ. ಎನ್‌ಡಿಎ ಉತ್ತಮ ಆಡಳಿತ ನೀಡಲಿದೆ

–ಶಿವರಾಜ್ ಹಿರೇಮಠ, ಹಾವೇರಿ

ದೇಶದಲ್ಲಿ ಸುಭದ್ರ ಸರ್ಕಾರ ರಚನೆಯಾಗಬೇಕು ಎಂಬ ಉದ್ದೇಶದಿಂದ ಮತದಾರರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಪ್ರಧಾನ ಮಂತ್ರಿ ಸ್ಥಾನಕ್ಕೆ ಮೋದಿ ಅವರೇ ಸೂಕ್ತ ವ್ಯಕ್ತಿ. ಐದು ವರ್ಷ‌ ಅವರು ನಡೆಸಿದ ಆಡಳಿತ ಚೆನ್ನಾಗಿತ್ತು. ಅದನ್ನು ನೋಡಿಯೇ ದೇಶದ ಜನ ಬಿಜೆಪಿಗೆ ಮತ ನೀಡಿದ್ದಾರೆ.

–ಶ್ರೀಹರಿ, ವಿದ್ಯಾರ್ಥಿ

ಎರಡನೇ ಬಾರಿಗೆ ಪ್ರಧಾನಿಯಾಗಲಿರುವ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ‌ಐದು ವರ್ಷಗಳ ಕಾಲ ದೇಶ ಮುನ್ನಡೆಸಿದ ಅನುಭವ ಹೊಂದಿರುವ ಮೋದಿ ಅವರಿಂದ ಅಭಿವೃದ್ಧಿ ಪರ್ವ ಮುಂದುವರಿಯಲಿದೆ. ಅವರಲ್ಲಿರುವ ಆತ್ಮವಿಶ್ವಾಸ ಹಾಗೂ ದೇಶ ಮುನ್ನಡೆಸುವ ಛಾತಿ ಬೇರೊಬ್ಬ ನಾಯಕರಲ್ಲಿ ಕಾಣಲು ಸಾಧ್ಯವಿಲ್ಲ.

–ಅಮೋಘ, ವಿದ್ಯಾರ್ಥಿ

ಕೇಂದ್ರ ಸರ್ಕಾರದ ಐದು ವರ್ಷಗಳ ಆಡಳಿತ ದೇಶದ ಜನತೆಗೆ ತೃಪ್ತಿ ತಂದಿದೆ ಎನ್ನುವುದು ಇಂದಿನ ಫಲಿತಾಂಶದ ಸಂದೇಶ. ದೇಶದ ಜನತೆ ನೀಡಿರುವ ತೀರ್ಪಿನಿಂದಾಗಿ ಜಗತ್ತೇ ಭಾರತದತ್ತ ತಿರುಗಿ ನೋಡುವಂತಾಗಿದೆ. ಮೋದಿ ಅವರಂಥ ವರ್ಚಸ್ವೀ ಹಾಗೂ ಜನಪರ ನಾಯಕ ದೇಶಕ್ಕೆ ಮುಖ್ಯ.

–ಭೀಮಾನಾಯ್ಕ, ವಿದ್ಯಾರ್ಥಿ

ಮತ್ತೆ ಐದು ವರ್ಷ ಆಡಳಿತ ನಡೆಸಲಿರುವ ಮೋದಿ ಬಡವರ ಪರವಾಗಿ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರಬೇಕು. ಈ ಬಾರಿ ರೈತರ ಪರವಾಗಿ ಅವರು ಯೋಜನೆ ರೂಪಿಸಿ, ರೈತ ದೇಶದ ಬೆನ್ನೆಲುಬು ಎಂಬುದನ್ನು ಸಾಬೀತುಪಡಿಸಬೇಕು.

–ಲಕ್ಷ್ಮಿ, ಬೆಳ್ಳಂದೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.