ಬೆಂಗಳೂರು: ನಗರದ ಮಂಗನಹಳ್ಳಿಯಲ್ಲಿ ಇತ್ತೀಚೆಗೆ ನಡೆದ ವಿದ್ಯುತ್ ಪರಿವರ್ತಕ ಸ್ಫೋಟ ಪ್ರಕರಣದಲ್ಲಿ ಬೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ತಪ್ಪು ಮಾಡಿಲ್ಲ. ಸಹಾಯವಾಣಿ ಸಿಬ್ಬಂದಿ ಸಕಾಲಕ್ಕೆ ಮಾಹಿತಿ ನೀಡದಿರುವುದರಿಂದ ಈ ದುರಂತ ಸಂಭವಿಸಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ತಿಳಿಸಿದೆ.
ಕೆಂಗೇರಿ–4ನೇ ಉಪವಿಭಾಗದಲ್ಲಿ ವಿದ್ಯುತ್ ಪರಿವರ್ತಕ ಸ್ಫೋಟಗೊಳ್ಳುವ ಮುನ್ನವೇ ಸಾರ್ವಜನಿಕರು ’1912’ ಸಂಖ್ಯೆಯ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆದರೆ, ಸಹಾಯವಾಣಿಯಲ್ಲಿನ ಸಿಬ್ಬಂದಿ ಕೆಂಗೇರಿ 4ನೇ ಉಪವಿಭಾಗದ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿಗೆ ಸಕಾಲದಲ್ಲಿ ಮಾಹಿತಿ ನೀಡಿಲ್ಲ. ಈ ಅವಘಡ ಸಂಭವಿಸಿದ ನಂತರ, ಸಹಾಯವಾಣಿ ಸಿಬ್ಬಂದಿಗಳಿಗೆ ದೂರವಾಣಿ ಮೂಲಕ ಸಂದೇಶ ರವಾನೆಯಾಗಿರುವುದು ತಿಳಿದು ಬಂದಿದೆ ಎಂದು ಸಂಘದ ಕಾರ್ಯದರ್ಶಿ ಎಸ್. ಕುಮಾರ್ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.
ಬೆಸ್ಕಾಂ 1912 ಸಂಖ್ಯೆಯ ಸಹಾಯವಾಣಿಯನ್ನು ಶೇ 95ರಷ್ಟು ಖಾಸಗಿ ಏಜೆನ್ಸಿಯ ಸಿಬ್ಬಂದಿಯೇ ನಿರ್ವಹಿಸುತ್ತಿದ್ದಾರೆ. ಈಗ ಒಂದು ತಿಂಗಳ ಹಿಂದೆಯಷ್ಟೇ ಹೊಸ ಏಜೆನ್ಸಿಯನ್ನು ಟೆಂಡರ್ ಪಡೆದಿದೆ. ಆದರೆ, ಸಿಬ್ಬಂದಿಗೆ ಸರಿಯಾದ ತರಬೇತಿ ಇಲ್ಲದಿರುವುದು ಸಹ ಕಂಡು ಬಂದಿದೆ. ಹೀಗಾಗಿ, ಅವಘಡಕ್ಕೆ ಇವರ ವೈಫಲ್ಯವೇ ಮುಖ್ಯ ಕಾರಣವಾಗಿದೆ. ಈ ಬಗ್ಗೆ ಸಮರ್ಪಕ ತನಿಖೆ ಮಾಡಿ ಬೆಸ್ಕಾಂ ವತಿಯಿಂದ ನೀಡಿರುವ ₹20 ಲಕ್ಷ ಪರಿಹಾರದ ಮೊತ್ತವನ್ನು ಖಾಸಗಿ ಏಜೆನ್ಸಿಯಿಂದ ವಸೂಲಿ ಮಾಡಬೇಕು ಎಂದು
ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.