ADVERTISEMENT

29 ಕೆರೆಗಳ 47 ಎಕರೆ ಒತ್ತುವರಿ ತೆರವು

ಕಳೆದ ವಾರವಷ್ಟೇ 141 ಎಕರೆ ವಶಕ್ಕೆ ಪಡೆದಿದ್ದ ನಗರ ಜಿಲ್ಲಾಡಳಿತ * ಮತ್ತೆ ₹ 73 ಕೋಟಿ ಮೌಲ್ಯದ ಸ್ವತ್ತು ವಶ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 22:15 IST
Last Updated 7 ಆಗಸ್ಟ್ 2021, 22:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಕೆರೆ ಜಾಗ, ಗೋಮಾಳ, ಗುಂಡುತೋಪುಗಳ ಒತ್ತುವರಿ ವಿರುದ್ಧ ಬೆಂಗಳೂರು ನಗರ ಜಿಲ್ಲಾಡಳಿತ ಭರ್ಜರಿ ಕಾರ್ಯಾಚರಣೆ ಆರಂಭಿಸಿದೆ. ಶನಿವಾರ ಒಂದೇ ದಿನ ಒಟ್ಟು 47 ಎಕರೆ 3 ಗುಂಟೆ ಜಾಗವನ್ನು ಸ್ವಾಧೀನ ಮಾಡಿಕೊಂಡಿದೆ. ಇವುಗಳ ಮೌಲ್ಯ ₹73.46 ಕೋಟಿ ಎಂದು ಅಂದಾಜಿಸಲಾಗಿದೆ.

ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ, ಆನೇಕಲ್ ಮತ್ತು ಯಲಹಂಕ ತಾಲ್ಲೂಕುಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಒತ್ತುವರಿ ಮಾಡಿ ನಿರ್ಮಿಸಿಕೊಂಡಿದ್ದ ಕಟ್ಟಡಗಳನ್ನು ಜೆಸಿಬಿ ಮೂಲಕ ನೆಲಸಮ ಮಾಡಲಾಗಿದೆ. ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ಆರಂಭವಾಗಿದ್ದು, ರಾತ್ರಿ ತನಕವೂ ಮುಂದುವರಿದಿತ್ತು.

ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಕಟ್ಟಡಗಳು ಚೆನ್ನಾಗಿದ್ದರೆ ಅವುಗಳನ್ನು ವಶಕ್ಕೆ ಪಡೆದು ಉಳಿಸಿಕೊಳ್ಳಲಾಗಿದೆ. ಸಾರ್ವಜನಿಕ ಉದ್ದೇಶದ ಕೆಲಸಗಳಿಗೆ ಅವುಗಳನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ವಿವರಿಸಿದರು.

ADVERTISEMENT

ಕಳೆದ ಶನಿವಾರ ನಡೆಸಿದ ಕಾರ್ಯಾಚರಣೆಯಲ್ಲಿ 58 ಕೆರೆಗಳಲ್ಲಿ ಒತ್ತುವರಿಯಾಗಿದ್ದ 141 ಎಕರೆ ಜಾಗದಲ್ಲಿದ್ದ ಕಟ್ಟಡ ತೆರವುಗೊಳಿಸಿ ವಶಕ್ಕೆ ಪಡೆಯಲಾಗಿತ್ತು. ಈ ಶನಿವಾರ ಮತ್ತೆ ನಡೆಸಿರುವ ಕಾರ್ಯಾಚರಣೆಯಲ್ಲಿ 29 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಆನೇಕಲ್ ತಾಲ್ಲೂಕಿನಲ್ಲಿ 10 ಕೆರೆಗಳಲ್ಲಿ ಒತ್ತುವರಿಯಾಗಿದ್ದ 15 ಎಕರೆ 23 ಗುಂಟೆ ಜಾಗವನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರು ಪೂರ್ವ ತಾಲ್ಲೂಕಿನ 8 ಕೆರೆಗಳಲ್ಲಿ ಒತ್ತುವರಿಯಾಗಿದ್ದ 7 ಎಕರೆ 24 ಗುಂಟೆ ತೆರವುಗೊಳಿಸಲಾಗಿದೆ.

ಯಲಹಂಕ ತಾಲ್ಲೂಕಿನ 5 ಕೆರೆಯಲ್ಲಿ 13 ಎಕರೆ 10 ಗುಂಟೆ ಜಾಗದಲ್ಲಿದ್ದ ಕಟ್ಟಡ ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ. ದಕ್ಷಿಣ ತಾಲ್ಲೂಕಿನ 4 ಕೆರೆಗಳ 5 ಎಕರೆ 9 ಗುಂಟೆ, ಉತ್ತರ ತಾಲ್ಲೂಕಿನ 2 ಕೆರೆಯಲ್ಲಿ ಒತ್ತುವರಿಯಾಗಿದ್ದ 5 ಎಕರೆ 7 ಗುಂಟೆ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.‌

ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಮನೆ, ಡೇರೆ ಸೂರುಗಳನ್ನು ಕಳೆದುಕೊಂಡವರು ಅಧಿಕಾರಿಗಳ ಜತೆ ಮಾತಿನ ಚಕಮಕಿಗೆ ಮುಂದಾದರು. ಪೊಲೀಸ್ ಭದ್ರತೆಯ ನಡುವೆ ಕಾರ್ಯಾಚರಣೆಯನ್ನು ಅಧಿಕಾರಿಗಳು ಮುಂದುವರಿಸಿದ್ದಾರೆ.

ಜಾಗ ಕಳೆದುಕೊಂಡ ನಿವೃತ್ತ ಎಂಜಿನಿಯರ್: ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಒಬ್ಬರು ಒತ್ತುವರಿ ಮಾಡಿಕೊಂಡಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ 14 ಎಕರೆ 8 ಗುಂಟೆ ಜಾಗ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ಪ್ರದೇಶದ ಹುಲಿಮಂಗಲ ಗ್ರಾಮ ವ್ಯಾಪ್ತಿಯ ಗೋಮಾಳವನ್ನು ಅವರು ಒತ್ತುವರಿ ಮಾಡಿಕೊಂಡಿದ್ದರು. ವಾಣಿಜ್ಯ ಕಟ್ಟಡಗಳನ್ನು ಆ ಜಾಗದಲ್ಲಿ ನಿರ್ಮಿಸಿದ್ದರು. ಉಪವಿಭಾಗಾಧಿಕಾರಿ ಎಂ.ಜಿ. ಶಿವಣ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಎಲ್ಲವನ್ನೂ ತೆರವುಗೊಳಿಸಲಾಯಿತು ಎಂದು ತಹಶೀಲ್ದಾರ್ ಪಿ. ದಿನೇಶ್ ತಿಳಿಸಿದರು.

‘ಈ ಜಾಗವನ್ನು ನಾನು ಖರೀದಿ ಮಾಡಿದ್ದೇನೆಯೇ ಹೊರತು ಒತ್ತುವರಿ ಮಾಡಿಲ್ಲ’ ಎಂದು ನಿವೃತ್ತ ಎಂಜನಿಯರ್ ಹಫೀಜ್ ಅಲವತ್ತುಕೊಂಡರು.

ಇನ್ನೂ ಮುಂದುವರಿಯಲಿದೆ ಕಾರ್ಯಾಚರಣೆ‌: ಜಿಲ್ಲಾಧಿಕಾರಿ

‘ಸರ್ಕಾರಿ ಗೋಮಾಳ, ತೋಪುಗಳು ಮತ್ತು ಕೆರೆಗಳನ್ನು ಸಾಕಷ್ಟು ಒತ್ತುವರಿ ಮಾಡಲಾಗಿದೆ. ಕೆರೆಗಳ ಸರ್ವೆ ನಡೆಸಬೇಕು ಎಂಬ ಹೈಕೋರ್ಟ್ ಆದೇಶದ ಹೊರತಾಗಿ ಎಲ್ಲಾ ರೀತಿಯ ಸರ್ಕಾರಿ ಜಾಗವನ್ನೂ ವಶಕ್ಕೆ ಪಡೆಯಲಾಗುತ್ತಿದೆ. ಕಾರ್ಯಚರಣೆ ಪ್ರತಿ ವಾರವೂ ಮುಂದುವರಿಯಲಿದೆ’ ಎಂದು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹೇಳಿದರು.

‘ಬೆಂಗಳೂರಿನಲ್ಲಿ 837 ಕೆರೆಗಳಿದ್ದು, ಬಹುತೇಕ ಕಡೆ ಒತ್ತುವರಿಯಾಗಿದೆ. ಮುಂದಿನ ಪೀಳಿಗೆಗೆ ಸರ್ಕಾರಿ ಜಾಗ ಉಳಿಸಬೇಕು ಎಂಬ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾಚರಕನಹಳ್ಳಿಯಲ್ಲಿ ಶೆಲ್ ಪೆಟ್ರೋಲ್ ಬಂಕ್ ಕೂಡ ತೆರವುಗೊಳಿಸಲಾಗುತ್ತಿದೆ’ ಎಂದು ‘ಪ್ರಜಾವಾಣಿ’ಗೆ ವಿವರಿಸಿದರು.

‘ಈ ರೀತಿಯ ಕಾರ್ಯಾಚರಣೆಯನ್ನು ಒಮ್ಮೆ ನಡೆಸಿದರೆ ಒತ್ತುವರಿ ಮಾಡಿಕೊಳ್ಳುವವರಲ್ಲಿ ಭಯ ಹುಟ್ಟುತ್ತದೆ. ಅನಧಿಕೃತವಾಗಿ ಕಟ್ಟಡ ನಿರ್ಮಿಸಿಕೊಂಡರೆ ಒಂದಲ್ಲ ಒಂದು ದಿನ ಸರ್ಕಾರ ಮತ್ತೆ ವಶಕ್ಕೆ ಪಡೆಯಲಿದೆ ಎಂಬುದು ಒತ್ತುವರಿದಾರರಿಗೆ ಗೊತ್ತಾಗಬೇಕಿದೆ’ ಎಂದರು.

ಪ್ರಭಾವ ಬಳಿಸಿ ಉಳಿಸಿಕೊಳ್ಳುವ ವಿಫಲ ಯತ್ನ

ಬಲಿಷ್ಠರೇ ಹೆಚ್ಚಿನದಾಗಿ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದು, ಪ್ರಭಾವ ಬಳಿಸಿ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಅಧಿಕಾರಿಗಳು ಫೋನ್ ಸ್ವಿಚ್‌ ಆಫ್ ಅಥವಾ ಏರೋಪ್ಲೇನ್ ಮೋಡ್‌ನಲ್ಲಿ ಇರಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದಾರೆ.

‘ಪ್ರಭಾವಿಗಳ ಶ್ರೀರಕ್ಷೆ ಇದೆ ಎಂದುಕೊಂಡು ಒತ್ತುವರಿ ಮಾಡಿದವರು ಈಗ ತೊಂದರೆಗೆ ಸಿಲುಕಿದ್ದು, ರಾಜಕಾರಣಿಗಳಿಗೆ ದುಂಬಾಲು ಬಿದ್ದು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಒಂದೆರಡು ದಿನ ಅವಕಾಶ ನೀಡಿದರೆ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತೇವೆ ಎಂದು ಕೇಳಿಕೊಳ್ಳುತ್ತಿದ್ದಾರೆ. ಅದ್ಯಾವುದಕ್ಕೂ ಅವಕಾಶ ನೀಡದೆ ತೆರವುಗೊಳಿಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.