ADVERTISEMENT

ಕ್ರೈಂ ಪೊಲೀಸರ ಸೋಗಿನಲ್ಲಿ ಸುಲಿಗೆ

ಕಬ್ಬನ್ ಉದ್ಯಾನದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 20:24 IST
Last Updated 21 ಡಿಸೆಂಬರ್ 2019, 20:24 IST

ಬೆಂಗಳೂರು: ಕ್ರೈಂ ಪೊಲೀಸರ ಸೋಗಿನಲ್ಲಿ ದುಷ್ಕರ್ಮಿಗಳಿಬ್ಬರು ಅಂಬರೀಷ್ ಅಡಿಗ ಎಂಬುವರನ್ನು ಸುಲಿಗೆ ಮಾಡಿದ್ದು, ಈ ಸಂಬಂದ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕಬ್ಬನ್ ಉದ್ಯಾನದಲ್ಲಿ ಇದೇ 10ರಂದು ನಡೆದಿರುವ ಘಟನೆ ಸಂಬಂಧ ಅಂಬರೀಷ್ ಅವರು ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಖಾಸಗಿ ಕಂಪನಿ ಉದ್ಯೋಗಿ ಆಗಿರುವ ದೂರುದಾರ ಅಂಬರೀಷ್ ಸಂಜೆ ಉದ್ಯಾನದಲ್ಲಿ ಕುಳಿತಿದ್ದರು. ಸ್ಥಳಕ್ಕೆ ಬಂದಿದ್ದ ದುಷ್ಕರ್ಮಿಗಳು, ತಾವು ಕ್ರೈಂ ಪೊಲೀಸರೆಂದು ಹೇಳಿಕೊಂಡಿದ್ದರು. ‘ನೀನು ದರೋಡೆ ಗ್ಯಾಂಗ್‌ ಸದಸ್ಯನಂತೆ ಕಾಣುತ್ತಿದ್ದಿಯಾ. ನಮಗೆ ₹ 30,000 ಕೊಡು. ಇಲ್ಲದಿದ್ದರೆ, ನಿನ್ನ ವಿರುದ್ಧ ಪ್ರಕರಣ ದಾಖಲಿಸುತ್ತೇವೆ’ ಎಂಬುದಾಗಿ ಆರೋಪಿಗಳು ಬೆದರಿಸಿದ್ದರು’ ಎಂದು ತಿಳಿಸಿದರು.

ADVERTISEMENT

‘ತಮ್ಮ ಬಳಿ ಹಣವಿಲ್ಲ, ಎಟಿಎಂ ಕಾರ್ಡ್ ಮಾತ್ರ ಇರುವುದಾಗಿ ದೂರುದಾರ ಹೇಳಿದ್ದರು. ಪುನಃ ಬೆದರಿಕೆಯೊಡ್ಡಿದ್ದ ಆರೋಪಿಗಳು ದೂರುದಾರರನ್ನು ಕಸ್ತೂರ್ ಬಾ ರಸ್ತೆಯ ಎಚ್‌ಡಿಎಫ್‌ಸಿ ಬ್ಯಾಂಕ್‌ ಎಟಿಎಂ ಘಟಕಕ್ಕೆ ಕರೆದೊಯ್ದಿದ್ದರು. ಅಲ್ಲಿಯೇ ₹ 30,000 ಡ್ರಾ ಮಾಡಿಸಿ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಅಂಬರೀಷ್ ಅವರು ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.