ವಂಚನೆ
ಬೆಂಗಳೂರು: ನಕಲಿ ಕಾಮಗಾರಿ ಪ್ರಮಾಣ ಪತ್ರ ಸಲ್ಲಿಸಿ 3ನೇ ದರ್ಜೆ ಗುತ್ತಿಗೆ ಪರವಾನಗಿ ಪಡೆದಿದ್ದ ವಿಷು ಸಿವಿಲ್ ಕನ್ಸ್ಟ್ರಕ್ಷನ್ನ ಎಂ. ಮನೋಜ್ ರೆಡ್ಡಿ ಅವರನ್ನು ಕಪ್ಪುಪಟ್ಟಿಗೆ ಸೇರಿಸಿ ಲೋಕೋಪಯೋಗಿ ಇಲಾಖೆ ಆದೇಶ ಹೊರಡಿಸಿದೆ.
ನೆಲಮಂಗಲ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಅವರಿಂದ ಕಾಮಗಾರಿ ಗುತ್ತಿಗೆ ಪ್ರಮಾಣ ಪತ್ರ ಪಡೆದಿರುವುದಾಗಿ ಮನೋಜ್ ರೆಡ್ಡಿ ಅವರು ಅರ್ಜಿಯಲ್ಲಿ ತಿಳಿಸಿ, ಸಲ್ಲಿಸಿರುತ್ತಾರೆ. ಈ ಬಗ್ಗೆ, ನೆಲಮಂಗಲ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರಿಂದ ಮಾಹಿತಿ ಪಡೆದಾಗ, ‘ಗುತ್ತಿಗೆದಾರರಿಗೆ ಯಾವುದೇ ಪ್ರಮಾಣ ಪತ್ರ ನೀಡಿಲ್ಲ’ ಎಂದು ತಿಳಿದುಬಂದಿದೆ. ಆದ್ದರಿಂದ, ಮನೋಜ್ ರೆಡ್ಡಿ ಅವರ ಗುತ್ತಿಗೆ ನೋಂದಣಿಯನ್ನು ಐದು ವರ್ಷಕ್ಕೆ ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಸರ್ಕಾರಕ್ಕೆ ಅವರಿಂದ ಬಾಕಿ ಬರಬೇಕಾದಲ್ಲಿ ವಸೂಲಿ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆ ಬೆಂಗಳೂರು ವೃತ್ತದ ಅಧೀಕ್ಷಕ ಎಂಜಿನಿಯರ್ ಆದೇಶ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.