ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಅವರ ಹೆಸರಿನಲ್ಲಿ ನಕಲಿ ಲೆಟರ್ಹೆಡ್ ಸೃಷ್ಟಿಸಿ ದುರ್ಬಳಕೆ ಮಾಡಿಕೊಂಡಿದ್ದ ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಮಹಾದೇವ ಬಂಧಿತ ಆರೋಪಿ.
ಸಚಿವರ ಕಚೇರಿಯ ಆಪ್ತ ಕಾರ್ಯದರ್ಶಿ ಸಿ.ಎಂ.ರಾಜೇಂದ್ರ ಅವರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.
‘ಆರೋಪಿ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮಗಳ ವ್ಯವಸ್ಥಾಪಕರಿಗೆ ಸಚಿವರ ಶಿಫಾರಸು ಇರುವಂತೆ ಲೆಟರ್ಹೆಡ್ ಸೃಷ್ಟಿಸಿದ್ದ. ಸಚಿವರ ನಕಲಿ ಸಹಿ ಮಾಡಿದ್ದ. ಸಮುದಾಯದ 20 ಮಂದಿಗೆ ಸಾಲ ಸೌಲಭ್ಯ ನೀಡುವಂತೆಯೂ ಪತ್ರದಲ್ಲಿ ಉಲ್ಲೇಖಿಸಿ ನಿಗಮಗಳ ವ್ಯವಸ್ಥಾಪಕರಿಗೆ ಇದೇ ನಕಲಿ ಪತ್ರವನ್ನು ಸಲ್ಲಿಸಿದ್ದ. ಇದೇ ಲೆಟರ್ಹೆಡ್ನಲ್ಲಿ ಪತ್ರವನ್ನು ಸಚಿವರ ಕಚೇರಿಗೂ ತಲುಪಿಸಿದ್ದ. ಆ ಪತ್ರವನ್ನು ನೋಡಿ ಅನುಮಾನಗೊಂಡ ರಾಜೇಂದ್ರ ಅವರು ಪರಿಶೀಲನೆ ನಡೆಸಿದಾಗ ನಕಲಿ ಎಂಬುದು ಗೊತ್ತಾಗಿದೆ. ತಕ್ಷಣ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.