ಬೆಂಗಳೂರು: ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಹೆಸರಿನಲ್ಲಿ ನಕಲಿ ಆದೇಶ ತಯಾರಿಸಿ ಕೋಟ್ಯಂತರ ರೂಪಾಯಿ ಸುಲಿಗೆ ಮಾಡಿದ್ದ ಆರೋಪದಡಿ ಇಬ್ಬರು ಆರೋಪಿಗಳನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ನ ವಿಜೀತ್(32) ಹಾಗೂ ಆತನ ಸಹಚರ ಬಿನ್ನಮಂಗಲ ನಿವಾಸಿ ಕೆ.ಎಚ್.ಲೋಹಿತ್(30) ಬಂಧಿತರು.
ಹೈಕೋರ್ಟ್ನ ಜಂಟಿ ರಿಜಿಸ್ಟ್ರಾರ್ ಎಂ.ರಾಜೇಶ್ವರಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು.
ಆರೋಪಿ ವಿಜೇತ್ ಡಿಪ್ಲೊಮಾ ವ್ಯಾಸಂಗ ಮಾಡಿದ್ದರೆ, ಲೋಹಿತ್ ಐಟಿಐ ವ್ಯಾಸಂಗ ಮಾಡಿದ್ದ. ಇಬ್ಬರೂ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಹೆಸರಿನಲ್ಲಿ ನಕಲಿ ಆದೇಶಗಳನ್ನು ತಯಾರಿಸಿ ಯುವತಿ ಸೇರಿದಂತೆ ನಾಲ್ವರು ಎಂಜಿನಿಯರ್ಗಳಿಗೆ ವ್ಯಾಟ್ಸ್ಆ್ಯಪ್ನಲ್ಲಿ ಕಳುಹಿಸಿ ₹1.53 ಕೋಟಿ ವಂಚಿಸಿದ್ದರು ಎಂದು ಪೊಲೀಸರು ಹೇಳಿದರು.
‘ಮದುವೆಗೆ ಸಂಬಂಧಿಸಿದ ವೆಬ್ಸೈಟ್ನಲ್ಲಿ ಆರೋಪಿ ವಿಜೇತ್ ತನ್ನ ಸ್ವವಿವರ ಹಾಕಿದ್ದ. ತಾನು ಸಿವಿಲ್ ಎಂಜಿನಿಯರ್ ಎಂಬುದುದಾಗಿಯೂ ನಮೂದಿಸಿಕೊಂಡಿದ್ದ. ಇದಕ್ಕೆ ಯುವತಿಯೊಬ್ಬಳು ಪ್ರತಿಕ್ರಿಯೆ ನೀಡಿದ್ದಳು. ಇಬ್ಬರೂ ಪರಿಚಯವಾಗಿದ್ದರು. ಮೊಬೈಲ್ ಸಂಖ್ಯೆ ಬದಲಾವಣೆ ಮಾಡಿಕೊಂಡು ಮಾತನಾಡುತ್ತಿದ್ದರು. ಈ ಮಧ್ಯೆ ಆರೋಪಿ, ತನ್ನ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ₹1 ಕೋಟಿ ಜಪ್ತಿ ಮಾಡಿಕೊಂಡಿದ್ದಾರೆ ಎಂಬುದಾಗಿ ನಂಬಿಸಿದ್ದ. ಅಲ್ಲದೇ ದಾಳಿ ನಡೆಸಿದ ಅಧಿಕಾರಿಗಳ ವಿರುದ್ಧ ಕೋರ್ಟ್ಗೆ ಹೋಗಿದ್ದೆ. ನ್ಯಾಯಾಲಯವು ಇ.ಡಿಗೆ ದಂಡ ವಿಧಿಸಿದ್ದು ಆ ಹಣವು ಸದ್ಯದಲ್ಲೇ ತನ್ನ ಖಾತೆಗೆ ಬರಲಿದೆ ಎಂಬುದಾಗಿ ಹೇಳಿದ್ದ. ಸದ್ಯ ನನ್ನ ಬಳಿ ಹಣವಿಲ್ಲ. ಹಣ ನೀಡುವಂತೆಯೂ ವಿಜೇತ್ ಕೇಳಿಕೊಂಡಿದ್ದ. ಆ ತನಕ ಮಾತು ನಂಬಿದ್ದ ಯುವತಿ ಹಂತಹಂತವಾಗಿ ₹50 ಲಕ್ಷಕ್ಕೂ ಅಧಿಕ ಹಣ ಹಣ ವರ್ಗಾವಣೆ ಮಾಡಿದ್ದಳು. ಅಲ್ಲದೇ ತನಗೆ ಪರಿಚಯಸ್ಥರಿಂದಲೂ ಹಣ ವರ್ಗಾವಣೆ ಮಾಡಿಸಿದ್ದಳು’ ಎಂದು ಮೂಲಗಳು ಹೇಳಿವೆ.
ಸ್ವವಿವರ ಡಿಲಿಟ್: ತನ್ನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾದ ಮೇಲೆ ವೆಬ್ಸೈಟ್ನಲ್ಲಿ ಹಾಕಿದ್ದ ವಿವರವನ್ನು ಆರೋಪಿ ಡಿಲಿಟ್ ಮಾಡಿದ್ದ. ನಂತರ, ಮೊಬೈಲ್ ನಂಬರ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದ. ಈ ಸಂಬಂಧ ಯುವತಿ ಹಾಗೂ ಆಕೆಯ ಸ್ನೇಹಿತರು ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.