ಬೆಂಗಳೂರು: ‘ನಾಗರಿಕತೆಗಳು ಹುಟ್ಟಿದ್ದೆ ಕೃಷಿಯಿಂದ. ಆದರೆ, ದೇಶದ ಬೆನ್ನುಲುಬಾದ ರೈತನನ್ನು ದೋಚುವುದು, ಶೋಷಣೆಗೈಯುವುದು ಹೆಚ್ಚಾಗುತ್ತಲೇ ಇದೆ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತುಮಂಗಳವಾರ ಆಯೋಜಿಸಿದ್ದ ಪ್ರೊ.ಸಿ.ಎಚ್.ಮರಿದೇವರು ಪ್ರತಿಷ್ಠಾನ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರೈತ ಸಮುದಾಯ ಸಂಪೂರ್ಣವಾಗಿ ಬಿಕ್ಕಟ್ಟಿಗೆ ಸಿಲುಕಿಕೊಂಡಿದೆ. ಸಾಲಮನ್ನಾ ಮಾಡಿದ್ದರೂ, ಮಾಡುತ್ತಿದ್ದರೂ ಅವರ ಬದುಕು ಸುಧಾರಣೆಯಾಗುತ್ತಿಲ್ಲ. ಬದಲಿಗೆ, ಆರ್ಥಿಕ, ನೈತಿಕ ಹಾಗೂ ಸಾಂಸ್ಕೃತಿಕವಾಗಿ ದಿವಾಳಿಯಾಗಿರುವುದು ನೋವಿನ ಸಂಗತಿ’ ಎಂದರು.
ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ, ‘ಈಗಾಗಲೇ 14 ಜಿಲ್ಲೆಗಳಲ್ಲಿ ಕೃಷಿ ಸಾಹಿತ್ಯ ಸಮಾವೇಶಗಳನ್ನು ನಡೆಸಲಾಗಿದೆ. ಧಾರವಾಡದಲ್ಲಿ ನಡೆಯಲಿರುವ84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಒಂದು ಗೋಷ್ಠಿ ನಡೆಯಲಿದೆ’ ಎಂದರು.
ಹಣ ಗಳಿಸುವ ಮಾರ್ಗವಾದ ಶಿಕ್ಷಣ:‘ಸಂಸ್ಕಾರ, ಮೌಲ್ಯ ಹಾಗೂ ಆತ್ಮವಿಶ್ವಾಸವನ್ನು ತುಂಬಬೇಕಿದ್ದ ಶಿಕ್ಷಣ, ಇಂದಿನ ದಿನಗಳಲ್ಲಿ ಹಣ ಗಳಿಸುವುದು ಹೇಗೆ ಎಂಬುದನ್ನು ಕಲಿಸುವ ಮಾರ್ಗವಾಗುತ್ತಿದೆ’ ಎಂದು ಶಿಕ್ಷಣ ತಜ್ಞ ಗುರುರಾಜ ಕರಜಗಿ ಆತಂಕ ವ್ಯಕ್ತಪಡಿಸಿದರು.
ಪರಿಷತ್ತಿನಿಂದ ‘ಸಂವಿಧಾನದ ಓದು’ ಪ್ರಕಟ
ನಾಗಮೋಹನದಾಸ್ ಅವರು ರಚಿಸಿದ ‘ಸಂವಿಧಾನದ ಓದು’ ಪುಸ್ತಕವನ್ನು ಸಾಹಿತ್ಯ ಪರಿಷತ್ತಿನ ವತಿಯಿಂದ ಸುಮಾರು 2,000 ಪ್ರತಿಗಳನ್ನು ಪ್ರಕಟಿಸಿ ಹಂಚಲಾಗುವುದು. ಇದಕ್ಕೆ ಅವರು ಅನುಮತಿ ನೀಡಬೇಕು’ ಎಂದು ಮನು ಬಳಿಗಾರ ಒತ್ತಾಯಿಸಿದರು.ಇದಕ್ಕೆ ನಾಗಮೋಹನದಾಸ್ ಅವರು ಒಪ್ಪಿಗೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.