ಬೆಂಗಳೂರು: ನಗರದ ರೂಪದರ್ಶಿಯೊಬ್ಬರನ್ನು ಕುಪ್ಪಂನ ಟೇಕಲ್ ರೈಲ್ವೆ ನಿಲ್ದಾಣಕ್ಕೆ ಕರೆದೊಯ್ದು ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪದಡಿ ಸೋಮಶೇಖರ್ (34) ಎಂಬಾತನನ್ನು ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
‘ಬಂಗಾರಪೇಟೆಯ ಸೋಮಶೇಖರ್, ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ಹೇಳಿ ರೂಪದರ್ಶಿಯನ್ನು ನಂಬಿಸಿದ್ದ. ಫೋಟೊಶೂಟ್ ನೆಪದಲ್ಲಿ ಅವರನ್ನು ಕರೆಸಿ ಕೃತ್ಯ ಎಸಗಿದ್ದ’ ಎಂದು ಪೊಲೀಸರು ಹೇಳಿದರು.
ವಾಟ್ಸ್ಆ್ಯಪ್ ಗ್ರೂಪ್ನಿಂದ ಪರಿಚಯ: ‘ವೆಬ್ ಧಾರಾವಾಹಿಗಳಲ್ಲಿ ನಟಿಸಿದ್ದ ರೂಪದರ್ಶಿ, ಸಿನಿಮಾ ಕಲಾವಿದರು ಹಾಗೂ ತಂತ್ರಜ್ಞರು ಇರುವ ವಾಟ್ಸ್ಆ್ಯಪ್ ಗ್ರೂಪ್ನಲ್ಲಿದ್ದರು. ಆ ಗ್ರೂಪ್ನಲ್ಲಿದ್ದ ಆರೋಪಿ, ರೂಪದರ್ಶಿಯ ಮೊಬೈಲ್ ನಂಬರ್ ಪಡೆದು ಕರೆ ಮಾಡಲಾರಂಭಿಸಿದ್ದ’ ಎಂದು ಪೊಲೀಸರು ಹೇಳಿದರು.
‘ನಿಮಗೆ ಸಿನಿಮಾದಲ್ಲಿ ಅವಕಾಶ ಕೊಡಿಸುತ್ತೇನೆ. ಅದಕ್ಕೂ ಮೊದಲು ಫೋಟೊಶೂಟ್ ಮಾಡಬೇಕು’ ಎಂದು ಹೇಳಿದ್ದ ಆರೋಪಿ, ರೂಪದರ್ಶಿಯನ್ನು ಮೇ 1ರಂದು ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಕರೆಸಿಕೊಂಡಿದ್ದ. ‘ಬಂಗಾರಪೇಟೆಯಲ್ಲಿ ನಮ್ಮ ತಂಡದವರು ಇದ್ದಾರೆ. ನಾವಿಬ್ಬರು ಅಲ್ಲಿಗೆ ಹೋಗಬೇಕು’ ಎಂದಿದ್ದ.’
‘ಆತನ ಮಾತು ನಂಬಿದ್ದ ರೂಪದರ್ಶಿ, ರೈಲು ಹತ್ತಿದ್ದರು. ಟೇಕಲ್ ನಿಲ್ದಾಣದಲ್ಲಿ ಇಳಿದಿದ್ದ ಇಬ್ಬರೂ ಹಳಿ ಪಕ್ಕದಲ್ಲಿ ನಡೆದುಕೊಂಡು ಹೊರಟಿದ್ದರು. ಅದೇ ವೇಳೆ ಆರೋಪಿ, ರೂಪದರ್ಶಿಯನ್ನು ತಳ್ಳಿ ಬೀಳಿಸಿದ್ದ. ನಂತರ, ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಅದನ್ನು ವಿರೋಧಿಸಿದ್ದಕ್ಕೆ ಕೈ– ಕಾಲು ಕಟ್ಟಿ ಹಾಕಿದ್ದ. ‘ನನಗೆ ₹5 ಲಕ್ಷ ಕೊಡು. ನಿನ್ನನ್ನು ಬಿಡುತ್ತೇನೆ’ ಎಂದು ಹೇಳಿದ್ದ’ ಎಂದು ಪೊಲೀಸರು ತಿಳಿಸಿದರು.
‘ಆತನಿಂದ ತಪ್ಪಿಸಿಕೊಂಡು ನಿಲ್ದಾಣಕ್ಕೆ ಹೋಗಿದ್ದ ರೂಪದರ್ಶಿ, ಅಲ್ಲಿಯ ಸಿಬ್ಬಂದಿಗೆ ವಿಷಯ ತಿಳಿಸಿದ್ದರು. ಅವರ ಮೂಲಕ ಸ್ನೇಹಿತರಿಗೆ ಕರೆ ಮಾಡಿ ನಿಲ್ದಾಣಕ್ಕೆ ಕರೆಸಿಕೊಂಡಿದ್ದರು. ಅಷ್ಟರಲ್ಲೇ ಆರೋಪಿ ಪರಾರಿಯಾಗಿದ್ದ. ರೂಪದರ್ಶಿ ದೂರು ನೀಡುತ್ತಿದ್ದಂತೆ ಬಂಗಾರಪೇಟೆಗೆ ಹೋಗಿ ಆತನನ್ನು ಬಂಧಿಸಲಾಯಿತು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.