ಬೆಂಗಳೂರು: ಪಿತ್ರಾರ್ಜಿತ ಆಸ್ತಿಯ ಜಮೀನಿಗೆ ಸಂಬಂಧಿಸಿದ ಮಾಹಿತಿ ಒದಗಿಸದ ಯಲಹಂಕ ತಹಶೀಲ್ದಾರ್ ಅನಿಲ್ ಕುಮಾರ್ ಅರೋಳಿಕರ್ ಅವರಿಗೆ ಕರ್ನಾಟಕ ಮಾಹಿತಿ ಆಯೋಗವು ₹25 ಸಾವಿರ ದಂಡ ವಿಧಿಸಿದೆ.
ಈ ಮೊತ್ತವನ್ನು ವೇತನದಿಂದ ಕಡಿತಗೊಳಿಸಿ, ವರದಿ ಸಲ್ಲಿಸಬೇಕು ಎಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಅವರಿಗೆ ನಿರ್ದೇಶನ ನೀಡಿದೆ.
ಜಾಲಾ ಹೋಬಳಿಯ ಹುತ್ತನಹಳ್ಳಿ ಗ್ರಾಮದಲ್ಲಿನ ಸರ್ವೇ ನಂ.72ರಲ್ಲಿನ ಪಿತ್ರಾರ್ಜಿತ ಆಸ್ತಿಯ ಜಮೀನಿಗೆ ಸಂಬಂಧಿಸಿದಂತೆ ಯಲಹಂಕ ತಾಲ್ಲೂಕಿನ ವಿಶೇಷ ತಹಶೀಲ್ದಾರ್ ಅವರು 2009ರ ಜ.23ರಂದು ನೀಡಿದ್ದ ಆದೇಶದ ನಕಲು ಪ್ರತಿಯನ್ನು ಪಡೆಯಲು ಬೆಂಗಳೂರು ಜಲಮಂಡಳಿಯ ನಿವೃತ್ತ ಎಂಜಿನಿಯರ್ ಎಚ್.ಪಿ. ಗೋಪಾಲಗೌಡ ಅವರು ಅರ್ಜಿ ಸಲ್ಲಿಸಿದ್ದರು. ಆದರೆ, ನಾಲ್ಕು ವರ್ಷಗಳು ಕಳೆದರೂ ಮಾಹಿತಿ ನೀಡಿರಲಿಲ್ಲ. ಈ ಬಗ್ಗೆ ಕರ್ನಾಟಕ ಮಾಹಿತಿ ಆಯೋಗಕ್ಕೆ ಅವರು ದೂರು ಸಲ್ಲಿಸಿದ್ದರು.
‘ಆಯೋಗವು ಹಲವು ಬಾರಿ ವಿಚಾರಣೆ ನಡೆಸಿ ಸೂಚನೆಗಳನ್ನು ನೀಡಿದ್ದರೂ ತಹಶೀಲ್ದಾರ್ ಅವರು ನಿರ್ಲಕ್ಷ್ಯ ತೋರಿದ್ದರು’ ಎಂದು ಗೋಪಾಲಗೌಡ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.