ಬೆಂಗಳೂರು: ನಗರದ ‘ಬ್ಲೂಟೆಕ್’ ಸಾಫ್ಟ್ವೇರ್ ಕಂಪನಿಗೆ ₹11.50 ಕೋಟಿ ವಂಚಿಸಿದ ಆರೋಪದಡಿ, ಕಂಪನಿಯ ಲೆಕ್ಕ ಪರಿಶೋಧಕಿ ಹಾಗೂ ಮಾಜಿ ನೌಕರರ ವಿರುದ್ಧ ಆಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ರಿಚ್ಮಂಡ್ ರಸ್ತೆಯಲ್ಲಿರುವ ಕಂಪನಿಯ ನಿರ್ದೇಶಕ ರಾಹುಲ್ ಸಿಂಗ್ ನೀಡಿರುವ ದೂರಿನನ್ವಯ 8 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ನಗದು ವಹಿವಾಟಿನ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದು ಅಶೋಕನಗರ ಪೊಲೀಸರು ಹೇಳಿದರು.
ದೂರಿನ ವಿವರ: ‘ಕಂಪನಿಯಲ್ಲಿ ಈ ಮೊದಲು ಕೆ.ವಿ. ಭಾಗವತ್, ಪ್ರಸನ್ನಕುಮಾರ, ಮೊಹಮ್ಮದ್ ಇಮ್ರಾನ್ ಎಂಬುವರು ಕೆಲಸ ಮಾಡುತ್ತಿದ್ದರು. ಭಾಗವತ್ ಅವರ ತಾಯಿಜಯಲಕ್ಷ್ಮಿ ವೆಂಕಟರಮಣ, ಕಂಪನಿಯ ಲೆಕ್ಕ ಪರಿಶೋಧಕಿ ಆಗಿದ್ದರು. ಇವರೆಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಕಂಪನಿಗೆ ವಂಚಿಸಿದ್ದಾರೆ’ ಎಂದು ರಾಹುಲ್ ಸಿಂಗ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
‘ಆರೋಪಿಗಳು, ಕಂಪನಿಯ ಖಾತೆಯಲ್ಲಿದ್ದ ₹11.50 ಕೋಟಿಯನ್ನು ತಮ್ಮ ಸಂಬಂಧಿಕರು ಹಾಗೂ ಪರಿಚಯಸ್ಥರ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾರೆ. ಜೊತೆಗೆ, ನಗದು ವರ್ಗಾವಣೆ ದಾಖಲೆಗಳನ್ನೆಲ್ಲ ನಾಶಪಡಿಸಿದ್ದಾರೆ. ಕಂಪನಿಗೆ ಮೋಸ ಮಾಡುವ ಉದ್ದೇಶದಿಂದಲೇ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ’.
‘ವಂಚನೆಯಿಂದ ಗಳಿಸಿದ್ದ ಹಣವನ್ನು ಆರೋಪಿಗಳು ಏನು ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ. ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಿ’ ಎಂದು ರಾಹುಲ್ ಸಿಂಗ್ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.