ADVERTISEMENT

ಸೇತುವೆ ನಿರ್ಮಿಸಿದ್ದ ವ್ಯಕ್ತಿ ವಿರುದ್ಧ ಎಫ್‌ಐಆರ್

ರಾಜಕಾಲುವೆಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ತೆರವು: ಪರಿಹಾರ ಕಾರ್ಯ ಚುರುಕು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 20:08 IST
Last Updated 11 ಅಕ್ಟೋಬರ್ 2019, 20:08 IST
ಬೆಲ್ಮರ ಲೇಔಟ್‌ನಲ್ಲಿ ಜೆಸಿಬಿಯಿಂದ ಸೇತುವೆ ತೆರವುಗೊಳಿಸುತ್ತಿರುವುದು
ಬೆಲ್ಮರ ಲೇಔಟ್‌ನಲ್ಲಿ ಜೆಸಿಬಿಯಿಂದ ಸೇತುವೆ ತೆರವುಗೊಳಿಸುತ್ತಿರುವುದು   

ಬೆಂಗಳೂರು/ರಾಜರಾಜೇಶ್ವರಿನಗರ: ಚೊಕ್ಕಸಂದ್ರ ವಾರ್ಡ್‌ನ ಬೆಲ್ಮರ ಲೇಔಟ್‌ನಲ್ಲಿ ರಾಜಕಾಲುವೆಗೆ ಅಡ್ಡಲಾಗಿ ಸೇತುವೆ ನಿರ್ಮಿಸಿದ್ದ ಡಿ.ಎಂ. ಸಂತೋಷ್‌ ವಿರುದ್ಧ ಬಿಬಿಎಂಪಿ ಅಧಿಕಾರಿಗಳ ಎಫ್‌ಐಆರ್ ದಾಖಲಿಸಿದ್ದಾರೆ. ಅಕ್ರಮ
ವಾಗಿ ನಿರ್ಮಿಸಿದ್ದ ಸೇತುವೆಯನ್ನು ಶುಕ್ರವಾರ ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.

ಸಂತೋಷ್‌ ಅವರು ರಾಜಕಾಲುವೆಗೆ ಅಡ್ಡಲಾಗಿ ಸೇತುವೆ ನಿರ್ಮಿಸಿದ್ದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗದೆ ‌ಪಕ್ಕದ ಬಡಾವಣೆಗಳಿಗೆ ನುಗ್ಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಬಸವರಾಜ್‌ ಅವರು ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪರಿಹಾರ ಕಾರ್ಯ: ದೊಡ್ಡಬಿದರಕಲ್ಲು ಕೆರೆಯ ಏರಿ ಒಡೆದಿದ್ದರಿಂದ ಭವಾನಿ ನಗರ, ಅನ್ನಪೂರ್ಣೇಶ್ವರಿ ಲೇಔಟ್, ಅಂದಾನಪ್ಪ ಬಡಾವಣೆ, ರಾಮಚಂದ್ರಪ್ಪ ಬಡಾವಣೆಗಳಲ್ಲಿ ರಾಜಕಾಲುವೆ, ಚರಂಡಿ, ರಸ್ತೆಯಲ್ಲಿ ತುಂಬಿಕೊಂಡಿದ್ದ ಕೆಸರು, ಮಣ್ಣನ್ನು, ಹೂಳನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದರು.

ADVERTISEMENT

ರಸ್ತೆ ಚರಂಡಿ ಮತ್ತು ಖಾಲಿ ನಿವೇಶನಗಳಲ್ಲಿ ಸಂಗ್ರಹವಾಗಿರುವ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆಯನ್ನು ‌ಹೇರೋಹಳ್ಳಿ ಬಿಬಿಎಂಪಿ ಉಪವಲಯ ಕಾಮಗಾರಿ ವಿಭಾಗದಿಂದ 85 ಪೌರ ಕಾರ್ಮಿಕರು 20 ಕೂಲಿ ಕಾರ್ಮಿಕರು ಹಗಲು ರಾತ್ರಿ ಎನ್ನದೆ ನಿರ್ವಹಿಸಿದರು. ಬಡಾವಣೆಯಲ್ಲಿ ರೋಗ ರುಜಿನಗಳು ಹರಡದಂತೆ ಬ್ಲೀಚಿಂಗ್ ಪೌಡರ್ ಮತ್ತು ಸೊಳ್ಳೆ ಔಷಧಿ ಸಿಂಪರಣೆ ಮಾಡಲಾಯಿತು’ ಎಂದು ಜಂಟಿ ಆಯುಕ್ತ ಎಚ್.ಬಾಲಶೇಖರ ಹೇಳಿದರು.

ನೀರು ನುಗ್ಗಿ ತೊಂದರೆಗೆ ಒಳಗಾದ ಬಡಾವಣೆಗಳಿಗೆ ಬಿಬಿಎಂಪಿ ವಿಶೇಷ ಆಯುಕ್ತ ಎಂ.ಲೋಕೇಶ್ ಭೇಟಿ ನೀಡಿ
ದರು. ಇಂದಿರಾ ಕ್ಯಾಂಟೀನ್‌ನಿಂದ ತರಿಸಿದ್ದ ಉಪಹಾರ ಮತ್ತು ನೀರಿನ ಬಾಟಲಿಗಳನ್ನು ಸಂತ್ರಸ್ತರಿಗೆ ವಿತರಿಸಲಾಯಿತು.

ಪಾಲಿಕೆ ಸದಸ್ಯ ಎಸ್.ವಾಸುದೇವ್ ಅವರು ಸುಮಾರು 200 ಕುಟುಂಬಗಳಿಗೆ ದಿನಸಿ ಹಾಗೂ ವಿವಿಧ ಸವಲತ್ತು, ನೀರಿನ ಕ್ಯಾನ್, ಬಾಟಲಿಗಳನ್ನು ವಿತರಿಸಿದರು.‌

ಲಗ್ನ ಪತ್ನಿಕೆ ನೀರು ಪಾಲು: ‘ಭವಾನಿ ನಗರದ ಸಾಕಮ್ಮ ಎಂಬುವರ ಮಗನ ಮದುವೆ ನಿಶ್ಚಯವಾಗಿದ್ದು, ಮನೆ
ಯಲ್ಲಿದ್ದ ಲಗ್ನ ಪತ್ರಿಕೆ, ದಿನಸಿ ಸಾಮಗ್ರಿಗಳು, ವಧುವಿಗಾಗಿ ತಂದಿದ್ದ ರೇಷ್ಮೆ ಸೀರೆ ನೀರುಪಾಲಾಗಿದೆ. ನವೆಂಬರ್ 1ರಂದು ಮದುವೆ ನಡೆಯಲಿದ್ದು, ಏನು ಮಾಡಬೇಕು’ ಎಂದು ಸಾಕಮ್ಮ ಕಣ್ಣೀರು ಹಾಕಿದರು.

ಪ್ರತಿಭಟನೆ: ಕೆರೆ ಒಡೆದು ಮನೆಗಳಿಗೆ ನೀರು ನುಗ್ಗಿ ನಷ್ಟ ಅನುಭವಿಸಿರುವ ನಿವಾಸಿಗಳಿಗೆ ಬಿಬಿಎಂಪಿ ಪರಿಹಾರ ನೀಡದಿದ್ದರೆ ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡರ ನೇತೃತ್ವದಲ್ಲಿ ಬಿಬಿಎಂಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಜೆಡಿಎಸ್‌ ಯಶವಂತಪುರ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷ ಟಿ.ಎನ್. ಜವರಾಯಿಗೌಡ ಎಚ್ಚರಿಸಿದರು.

ಕಾಂಗ್ರೆಸ್ ಮುಖಂಡ ಎಂ.ರಾಜ್‍ಕುಮಾರ್ ಅವರೂ ಈ ಬಡಾವಣೆಗಳಿಗೆ ಭೇಟಿ ನೀಡಿ ಬಿಬಿಎಂಪಿ ಮತ್ತು ಜಲಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನೊಂದವರಿಗೆ ಪರಿಹಾರ ನೀಡದಿದ್ದರೆ ವಿಧಾನ
ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ನೇತೃತ್ವದಲ್ಲಿ ಪ್ರತಿಭಟಿಸಲಾಗುವುದು ಎಂದರು.

ಪರಿಹಾರ ನೀಡದಿದ್ದರೆ ಪ್ರತಿಭಟನೆ

ಕೆರೆ ಒಡೆದು ಮನೆಗಳಿಗೆ ನೀರು ನುಗ್ಗಿ ನಷ್ಟ ಅನುಭವಿಸಿರುವ ನಿವಾಸಿಗಳಿಗೆ ಬಿಬಿಎಂಪಿ ಪರಿಹಾರ ನೀಡದಿದ್ದರೆ ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡರ ನೇತೃತ್ವದಲ್ಲಿ ಬಿಬಿಎಂಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಜೆಡಿಎಸ್‌ ಯಶವಂತಪುರ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷ ಟಿ.ಎನ್. ಜವರಾಯಿಗೌಡ ಎಚ್ಚರಿಸಿದರು.

ಬಡಾವಣೆಗಳಿಗೆ ಶುಕ್ರವಾರ ಭೇಟಿ ನೀಡಿದ ಅವರು ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ‘ಈ ಅನಾಹುತಕ್ಕೆ ‌ಜಲಮಂಡಳಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೇ ಕಾರಣ. ಅನರ್ಹ ಶಾಸಕ ಎಸ್‌.ಟಿ. ಸೋಮಶೇಖರ ಅವರು ಬೇರೆಯವರ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ಸರ್ಕಾರ ಮತ್ತು ಬಿಬಿಎಂಪಿ ಮೇಲೆ ಒತ್ತಡ ಹೇರಿ ನಗರೋತ್ಥಾನ ಯೋಜನೆಯ ಕಾಮಗಾರಿಗಳಿಗೆ ಅನುದಾನ ಕೊಡಿಸಲಿ’ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಮುಖಂಡ ಎಂ.ರಾಜ್‍ಕುಮಾರ್ ಅವರೂ ಈ ಬಡಾವಣೆಗಳಿಗೆ ಭೇಟಿ ನೀಡಿ ಬಿಬಿಎಂಪಿ ಮತ್ತು ಜಲಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನೊಂದವರಿಗೆ ಪರಿಹಾರ ನೀಡದಿದ್ದರೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.

‘ಏರಿ ಒಡೆದಿಲ್ಲ’

‘ಜಲಮಂಡಳಿ ಕೈಗೆತ್ತಿಕೊಂಡಿದ್ದ ಕಾಮಗಾರಿಯ ಪರಿಣಾಮ ದೊಡ್ಡಬಿದರಕಲ್ಲು ಕೆರೆ ಏರಿ ಒಡೆದಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಕೆರೆ ಕೋಡಿ ಬೀಳಲು ಭಾರಿ ಮಳೆ ಕಾರಣವೇ ವಿನಃ ಕಾಮಗಾರಿ ಅಲ್ಲ’ ಎಂದು ಜಲಮಂಡಳಿ ಮತ್ತು ಬಿಬಿಎಂಪಿ ಜಂಟಿ ಹೇಳಿಕೆಯಲ್ಲಿ ಸ್ಪಷ್ಟ ಪಡಿಸಿವೆ.

‘ಕೊಳವೆ ಮಾರ್ಗದ ಕಾಮಗಾರಿಯನ್ನು ಕೈಗೊಂಡಾಗ ಈಗಾಗಲೇ ಅಸ್ತಿತ್ವದಲ್ಲಿರುವ ತೂಬಿನ ಮೂಲಕ ಕೊಳವೆಯನ್ನು ಎಸ್‌ಟಿಪಿಗೆ ಅಳವಡಿಸುವ ಕಾಮಗಾರಿ ಸಮಯದಲ್ಲಿ ಕೆರೆಯ ಏರಿಗಾಗಲಿ, ತೂಬಿಗಾಗಲಿ ಯಾವುದೇ ಹಾನಿಯಾಗದಂತೆ ಎಚ್ಚರ ವಹಿಸಲಾಗಿದೆ’ ಎಂದು ಜಲಮಂಡಳಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.