ಬೆಂಗಳೂರು: ಲಗ್ಗೆರೆಯ ಚಾಮುಂಡಿ ನಗರದ ಹೈ ಟೆನ್ಶನ್ ಲೈನ್ ಸ್ಟ್ರೀಟ್ನ ಗುಜರಿ ಅಂಗಡಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಅಕ್ಕ–ಪಕ್ಕದ ಮನೆಗಳಿಗೂ ಬೆಂಕಿ ವ್ಯಾಪಿಸಿದೆ. ಜೊತೆಗೆ, ಮನೆಯ ಪಕ್ಕದಲ್ಲಿದ್ದ ಆಸರೆ ವೃದ್ಧಾಶ್ರಮದೊಳಗೆ ಹೊಗೆ ಆವರಿಸಿಕೊಂಡಿದ್ದು, ಕಟ್ಟಡದಲ್ಲಿರುವ ವೃದ್ಧರನ್ನು ಸ್ಥಳಾಂತರ ಮಾಡಲಾಗುತ್ತಿದೆ.
ಹಳೇ ಟೈರ್ ಸಂಗ್ರಹಿಸಿದ್ದ ಗುಜರಿ ಅಂಗಡಿಯಲ್ಲಿ ಶನಿವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿತ್ತು. ಕೆಲ ಕ್ಷಣಗಳಲ್ಲಿ ಬೆಂಕಿ ಕೆನ್ನಾಲಗೆ ಹೆಚ್ಚಾಗಿತ್ತು. ಅಕ್ಕ– ಪಕ್ಕದ ಎರಡು ಮನೆಗೂ ಬೆಂಕಿ ಹೊತ್ತಿಕೊಂಡಿತ್ತು. ನಿವಾಸಿಗಳು ಮನೆಯಿಂದ ಹೊರಗೆ ಓಡಿಬಂದು ಜೀವ ಉಳಿಸಿಕೊಂಡಿದ್ದಾರೆ.
ಗುಜರಿ ಅಂಗಡಿಯಲ್ಲಿ ಹೆಚ್ಚು ವಸ್ತುಗಳಿದ್ದವು. ಎಲ್ಲದ್ದಕ್ಕೂ ಬೆಂಕಿ ಹೊತ್ತಿಕೊಂಡಿದ್ದರಿಂದ, ಬೆಂಕಿ ಧಗ ಧಗ ಉರಿಯಲಾರಂಭಿಸಿತ್ತು. ನಂತರ, ಸಮೀಪದಲ್ಲಿದ್ದ ‘ಆಸರೆ‘ ವೃದ್ಧಾಶ್ರಮದ ಕಟ್ಟಡದೊಳಗೆ ಹೊಗೆ ಹೋಗುತ್ತಿತ್ತು. ವೃದ್ಧರು ಆತಂಕಗೊಂಡರು. ವೃದ್ಧಾಶ್ರಮ ಆಡಳಿತ ಮಂಡಳಿ ಸದಸ್ಯರು ಹಾಗೂ ಇತರರು, ವೃದ್ಧರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.