ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಎಲ್ಪಿಜಿ ಸಿಲಿಂಡರ್ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಒಂದು ಆಟೊ ಹಾಗೂ ನಾಲ್ಕು ದ್ವಿಚಕ್ರ ವಾಹನಗಳು ಸುಟ್ಟು ಹೋಗಿರುವ ಘಟನೆ ಗುರುವಾರ ರಾತ್ರಿ ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಈಜಿಪುರದಲ್ಲಿ ನಡೆದಿದೆ.
ರಸ್ತೆ ಪಕ್ಕದಲ್ಲಿದ್ದ ಕಟ್ಟಡದಲ್ಲಿನ ಬಿರಿಯಾನಿ ಹೋಟೆಲ್ನಲ್ಲಿ ಕಬಾಬ್ ತಯಾರಿಸುವ ವೇಳೆ ಸಿಲಿಂಡರ್ ಖಾಲಿ ಆಗಿದೆ. ಆಗ ಮಾಲೀಕ ಸಿಲಿಂಡರ್ ಬದಲಿಸುವ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಗಾಬರಿಗೊಂಡು ಸಿಲಿಂಡರ್ ಅನ್ನು ರಸ್ತೆಗೆ ಬಿಸಾಡಿದ್ದಾರೆ. ಅದು ಅಲ್ಲಿಯೇ ನಿಂತಿದ್ದ ಆಟೊ ಒಳಗೆ ಬಿದ್ದಿದ್ದರಿಂದ ಬೆಂಕಿ ಹೊತ್ತಿಕೊಂಡಿತು. ಅಗ್ನಿಯ ಜ್ವಾಲೆ ಹೆಚ್ಚಾಗುತ್ತಲೇ ಅಕ್ಕಪಕ್ಕದ ನಾಲ್ಕು ದ್ವಿಚಕ್ರ ವಾಹನಗಳಿಗೂ ಬೆಂಕಿ ತಗುಲಿದೆ. ಐದು ವಾಹನಗಳು ಸಂಪೂರ್ಣ ಸುಟ್ಟು ಹೋಗಿವೆ.
ಪಕ್ಕದಲ್ಲಿಯೇ ಇದ್ದ ವಿದ್ಯುತ್ ಕಂಬಕ್ಕೆ ಬೆಂಕಿ ತಗುಲಿದ ಕಾರಣ ತಂತಿಗಳು ಸುಟ್ಟು ಹೋಗಿವೆ. ಘಟನೆಯಿಂದಾಗಿ ಸುಮಾರು ₹ 2.5 ಲಕ್ಷ ನಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರು ಹಾಗೂ ಅಂಗಡಿ ಸಿಬ್ಬಂದಿ ನೀರು ಸುರಿದು ಬೆಂಕಿ ನಂದಿಸಲು ಪ್ರಯತ್ನಿಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಸುಮಾರು ಒಂದು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.
ವಿವೇಕನಗರ ಪೊಲೀಸರು ಕಟ್ಟಡದ ಮಾಲೀಕ ಹಾಗೂ ಬಿರಿಯಾನಿ ಹೋಟೆಲ್ ನಡೆಸುತ್ತಿದ್ದ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.