ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಯಾಣಿಸಬೇಕಿದ್ದ ಮಾರ್ಗದಲ್ಲಿ ಬೆಂಕಿ ಅವಘಡ ಸಂಭವಿಸಿದ್ದರಿಂದ, ಬದಲಿ ಮಾರ್ಗದಲ್ಲಿ ಅವರ ಸಂಚಾರಕ್ಕೆ ಪೊಲೀಸರು ಅನುಕೂಲ ಮಾಡಿಕೊಟ್ಟರು.
‘ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು ಎದುರಿನ ರಸ್ತೆ ಮೂಲಕ ಅಮಿತ್ ಶಾ ಅವರು ಶುಕ್ರವಾರ ಅರಮನೆ ಮೈದಾನಕ್ಕೆ ತೆರಳಬೇಕಿತ್ತು. ಕಾಲೇಜು ಬಳಿ ವಿದ್ಯುತ್ ಶಾರ್ಟ್ ಸರ್ಕೀಟ್ನಿಂದ ಬೀದಿ ದೀಪದ ತಂತಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಬೆಂಕಿ ಕೆನ್ನಾಲಗೆ ಹೆಚ್ಚಾಗಿತ್ತು. ಹೊಗೆಯೂ ಜಾಸ್ತಿ ಇತ್ತು.
ಸ್ಥಳೀಯರು ಆತಂಕಗೊಂಡಿದ್ದರು. ರಸ್ತೆಯಲ್ಲಿ ಗಸ್ತಿನಲ್ಲಿದ್ದ ಪೊಲೀಸರು, ಬೆಂಕಿ ನಂದಿಸಿದರು. ಅವರು ನೀಡಿದ ಮಾಹಿತಿಯಂತೆ, ಮುಂಜಾಗ್ರತಾ ಕ್ರಮವಾಗಿ ಅಮಿತ್ ಶಾ ಅವರನ್ನು ಬದಲಿ ಮಾರ್ಗದಲ್ಲಿ ಕರೆದೊಯ್ಯಲಾಯಿತು’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.
ಕಮಿಷನರ್ ಭೇಟಿ: ಬೆಂಕಿ ಕಾಣಿಸಿಕೊಂಡ ಸ್ಥಳಕ್ಕೆ ಕಮಿಷನರ್ ಕಮಲ್ ಪಂತ್ ಭೇಟಿ ನೀಡಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬೆಸ್ಕಾಂ ಅಧಿಕಾರಿಗಳು ಬೀದಿ ದೀಪಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲೇ ಬೀದಿದೀಪ ಸಮಸ್ಯೆಯಿಂದಾಗಿ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಗಿದೆ’ ಎಂದು ಹೇಳಿದರು.
‘ಕಾಲೇಜು ಬಳಿ ಜೋರು ಶಬ್ದ ಕೇಳಿಸಿದ್ದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಆ ಬಗ್ಗೆಯೂ ಪರಿಶೀಲಿಸಲಾಗಿದ್ದು, ಜನರು ಆತಂಕಪಡುವ ಅವಶ್ಯಕತೆ ಇಲ್ಲ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.