ADVERTISEMENT

ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆಗೆ ಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮತ್ಸ್ಯಮೇಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 15:52 IST
Last Updated 22 ನವೆಂಬರ್ 2025, 15:52 IST
ಮತ್ಸ್ಯಮೇಳದಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕೆ ಇಟ್ಟಿದ್ದ ಮೀನುಗಳನ್ನು ಮಂಕಾಳ ಎಸ್. ವೈದ್ಯ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಹಾಗೂ ಬೈರತಿ ಸುರೇಶ್ ಅವರು ವೀಕ್ಷಿಸಿದರು  
ಪ್ರಜಾವಾಣಿ ಚಿತ್ರ
ಮತ್ಸ್ಯಮೇಳದಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕೆ ಇಟ್ಟಿದ್ದ ಮೀನುಗಳನ್ನು ಮಂಕಾಳ ಎಸ್. ವೈದ್ಯ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಹಾಗೂ ಬೈರತಿ ಸುರೇಶ್ ಅವರು ವೀಕ್ಷಿಸಿದರು   ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರ ಸಿದ್ಧವಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. 

ವಿಶ್ವ ಮೀನುಗಾರಿಕೆ ದಿನಾಚರಣೆಯ ಅಂಗವಾಗಿ ಮೀನುಗಾರಿಕೆ ಇಲಾಖೆ ಆಯೋಜಿಸಿರುವ ಮತ್ಸ್ಯಮೇಳಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. 

‘ಒಳನಾಡು ಮತ್ತು ಕರಾವಳಿ ಪ್ರದೇಶದ ಮೀನುಗಾರರಿಗೆ ಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುವುದು. ರಾಜ್ಯದಲ್ಲಿ 320 ಕಿ.ಮೀ. ಕರಾವಳಿ ಪ್ರದೇಶ, 5.5 ಲಕ್ಷ ಹೆಕ್ಟೇರ್ ಒಳನಾಡು ಜಲ ಪ್ರದೇಶ ಇದೆ. ಮೀನು ರಫ್ತು ಮಾಡುವುದರಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಮೀನು ಉತ್ಪಾದನೆಯಲ್ಲಿ ದೇಶದಲ್ಲಿಯೇ ರಾಜ್ಯ ಮೂರನೇ ಸ್ಥಾನದಲ್ಲಿದೆ. ಒಟ್ಟಾರೆ ಮೀನುಗಾರಿಕೆ ಕ್ಷೇತ್ರವು 10 ಲಕ್ಷಕ್ಕೂ ಹೆಚ್ಚು ಜನರ ಜೀವನಕ್ಕೆ ಆಸರೆಯಾಗಿದೆ’ ಎಂದರು‌.

ADVERTISEMENT

‘ನಮ್ಮ ಸರ್ಕಾರ ಬಂದ ಮೇಲೆ ಯಾಂತ್ರೀಕೃತ ದೋಣಿಗಳ ಡೀಸೆಲ್ ಮೇಲಿನ ವಾರ್ಷಿಕ ಮಿತಿಯನ್ನು 1.5 ಲಕ್ಷ ಕಿಲೋ ಲೀಟರ್‌ನಿಂದ 2 ಲಕ್ಷ ಕಿಲೋ ಲೀಟರ್‌ಗೆ ಹೆಚ್ಚಿಸಲಾಗಿದೆ. ನಾಡ ದೋಣಿಗಳಿಗೆ ಸೀಮೆ ಎಣ್ಣೆಯನ್ನು ಪ್ರತಿ ಲೀಟರ್‌ಗೆ ₹35 ರಿಯಾಯಿತಿ ದರದಲ್ಲಿ ವಿತರಣೆ ಮಾಡುತ್ತಿದ್ದೇವೆ. ₹7 ಕೋಟಿ ವೆಚ್ಚದಲ್ಲಿ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸುವ ಆಂಬುಲೆನ್ಸ್‌ ಸೇವೆ ಜಾರಿಗೊಳಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು. 

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಮುಂದಿನ ದಿನಗಳಲ್ಲಿ ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನು ರೂಪಿಸಲಾಗುವುದು. ಮೀನುಗಾರಿಕೆಗೆ ಉತ್ತೇಜನ ನೀಡಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು’ ಎಂದರು.

‘ಸಿದ್ದರಾಮಯ್ಯ ನೇತೃತ್ವದಲ್ಲಿ 10 ಸಾವಿರಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದೇವೆ. ಸಣ್ಣ ಕೆರೆಗಳ ಜವಾಬ್ದಾರಿಯನ್ನು ಸೊಸೈಟಿಗಳಿಗೆ ನೀಡುತ್ತೇವೆ. ಉಳಿದ ಕೆರೆಗಳನ್ನು ಹರಾಜು ಪ್ರಕ್ರಿಯೆ ಮೂಲಕ ಮೀನುಗಾರಿಕೆ ಮಾಡಲು ನೀಡಲಾಗುವುದು. ಇದನ್ನು ಬಳಸಿಕೊಂಡು ಮೀನುಗಾರಿಕೆ ವೃತ್ತಿಯಲ್ಲಿ ತೊಡಗಬೇಕು’ ಎಂದರು. 

ಇದೇ ಸಂದರ್ಭದಲ್ಲಿ ಒಳನಾಡು ಭಾಗದ ಪ್ರಗತಿಪರ ಮೀನುಗಾರರಾದ ಯಾದಗಿರಿ ಜಿಲ್ಲೆಯ ಕನುಮಿಲ್ಲಿ ಶ್ರೀನಿವಾಸರಾವ್‌, ಬಳ್ಳಾರಿ ಜಿಲ್ಲೆಯ ಸಿ.ಎಚ್. ಮಾಹಕಾಳಿ, ಹಾವೇರಿ ಜಿಲ್ಲೆಯ ಯಾಸೀನ್ ಅಬ್ದುಲ್‌ಸಾಬ್ ಮುಜಾವರ, ಮಂಡ್ಯ ಜಿಲ್ಲೆಯ ಬಿ.ಸಿ. ಸುಶೀಲಮ್ಮ ಹಾಗೂ ಉಡುಪಿ ಜಿಲ್ಲೆಯ ಡೆರಿಕ್ ವಿಲಿಯಮ್ ಕ್ರಾಸ್ಟಾ, ಶ್ರೀಧರ್ ಹೆಗ್ಡೆ, ಉತ್ತರ ಕನ್ನಡ ಜಿಲ್ಲೆಯ ಲಿಂಗಯ್ಯ ಜಟ್ಟಪ್ಪ ಮೊಗೇರ ಅವರಿಗೆ ‘ಪ್ರಗತಿಪರ ಮೀನುಗಾರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಮೃತ ಮೀನುಗಾರರ ಕುಟುಂಬಗಳ ವಾರಸುದಾರರಾದ ಉತ್ತರ ಕನ್ನಡ ಜಿಲ್ಲೆಯ ಮಹಾದೇವಿ ನಾರಾಯಣ ಅಂಬಿಗ ಹಾಗೂ ನೂತನ ಸುನೀಲ ಹರಿಕಂತ್ರ ಅವರಿಗೆ ತಲಾ ₹10 ಲಕ್ಷ, ಉಡುಪಿ ಜಿಲ್ಲೆಯ ರತ್ನಾ ಬಾಯಿ ಅವರಿಗೆ ₹8 ಲಕ್ಷ ಪರಿಹಾರ ಧನದ ಚೆಕ್‌ ವಿತರಿಸಲಾಯಿತು. 

ಮೀನುಗಾರಿಕೆ ಸಚಿವ ಮಂಕಾಳ ಎಸ್. ವೈದ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಶಮ್ಲಾ ಇಕ್ಬಾಲ್, ನಿರ್ದೇಶಕ ದಿನೇಶ್ ಕುಮಾರ್ ಕಳ್ಳೇರ್ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.