ಬೆಂಗಳೂರು: ‘ತಂದೆ ಎಸ್. ಶ್ರೀಧರ್ ಅವರನ್ನು ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ನೀಡಿದ ದೂರು ಹಿಂಪಡೆಯಲು ಮಗ ಚಂದರೇಶ್ ಅರ್ಜಿ ಸಲ್ಲಿಸಿದ್ದು, ಇದರ ಬೆನ್ನಲ್ಲೇ ವಂಚನೆ ಪ್ರಕರಣದಲ್ಲಿ ಶ್ರೀಧರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
‘ಚೀಟಿ ಹೆಸರಿನಲ್ಲಿ ಜನರಿಂದ ₹ 2.91 ಕೋಟಿ ಸಂಗ್ರಹಿಸಿದ್ದ ಆರ್. ಶ್ರೀಧರ್, ಹಣ ವಾಪಸು ನೀಡದೇ ವಂಚಿಸಿದ್ದರು. ಈ ಸಂಬಂಧ ದಾಖಲಾದ ಪ್ರಕರಣದ ವಿಚಾರಣೆಗಾಗಿ ಶ್ರೀಧರ್ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಇದನ್ನೇ ಅಕ್ರಮ ಬಂಧನವೆಂದು ಆಯೋಗಕ್ಕೆ ಮಗ ಸುಳ್ಳು ದೂರು ನೀಡಿದ್ದರು. ಪೊಲೀಸರು ಹಣ ಕೇಳಿದ್ದಾರೆಂದು ಸುಖಾಸುಮ್ಮನೇ ಆರೋಪಿಸಿದ್ದರು. ಬಂಧನ ತಪ್ಪಿಸುವ ಉದ್ದೇಶ ಇದರ ಹಿಂದಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ದೂರು ನಿಜವೆಂದು ತಿಳಿದು ಆಯೋಗದ ಡಿವೈಎಸ್ಪಿ ನೇತೃತ್ವದ ತಂಡವೂ ಠಾಣೆ ಮೇಲೆ ಜ. 20ರಂದು ದಾಳಿ ಮಾಡಿತ್ತು’
‘ಪ್ರಕರಣದ ಬಗ್ಗೆ ಆಯೋಗವು ಸೋಮವಾರ ವಿಚಾರಣೆ ನಡೆಸಿತು. ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಮಗ ಚಂದರೇಶ್, ದೂರು ಹಿಂಪಡೆಯಲು ಸಲ್ಲಿಸಿದ್ದ ಅರ್ಜಿಯೂ ಪ್ರಸ್ತಾಪವಾಯಿತು. ‘ವಂಚನೆ ಪ್ರಕರಣವೇ ನನಗೆ ಗೊತ್ತಿರಲಿಲ್ಲ. ವಕೀಲರು ದಿಕ್ಕು ತಪ್ಪಿಸಿದರು. ನನ್ನ ದೂರು ಹಿಂಪಡೆಯುತ್ತೇನೆ’ ಎಂಬುದಾಗಿ ಚಂದರೇಶ್ ಅರ್ಜಿಯಲ್ಲಿ ಉಲ್ಲೇಖಿಸಿ
ದ್ದರು’ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.