ADVERTISEMENT

ಸ್ನೇಹಿತೆ ಮನೆಯಲ್ಲಿ 200 ಗ್ರಾಂ ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2022, 20:46 IST
Last Updated 20 ಆಗಸ್ಟ್ 2022, 20:46 IST
ಶಶಿಕಲಾ
ಶಶಿಕಲಾ   

ಬೆಂಗಳೂರು: ತನ್ನ ಸ್ನೇಹಿತೆ ಮನೆಯಲ್ಲೇ ಚಿನ್ನಾಭರಣ ಕದ್ದಿದ್ದ ಆರೋಪದಡಿ ಮಹಿಳೆ ಸೇರಿ ಇಬ್ಬರನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಶ್ರೀರಾಮಪುರ ನಿವಾಸಿ ಶಶಿಕಲಾ (39) ಹಾಗೂ ಪ್ರಶಾಂತ (26) ಬಂಧಿತರು. ಆರೋಪಿಗಳಿಂದ ₹ 12 ಲಕ್ಷ ಮೌಲ್ಯದ 200 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ಹೇಳಿದರು.

‘ಬಟ್ಟೆ ವ್ಯಾಪಾರ ಮಾಡುತ್ತಿರುವ ಭಾಗ್ಯಲಕ್ಷ್ಮಿ ಎಂಬುವರು ರಾಮಚಂದ್ರಾಪುರದ 1ನೇ ಮುಖ್ಯರಸ್ತೆಯಲ್ಲಿ ನೆಲೆಸಿದ್ದಾರೆ. ಅವರ ಸ್ನೇಹಿತೆಯಾಗಿದ್ದ ಆರೋಪಿ ಶಶಿಕಲಾ, ಇದೇ 5ರಂದು ಬೆಳಿಗ್ಗೆ 8.30ರ ಸುಮಾರಿಗೆ ಮನೆಗೆ ಹೋಗಿದ್ದರು. ಸ್ನೇಹಿತೆಯನ್ನು ಬರಮಾಡಿಕೊಂಡು ಟೀ ಮಾಡಿಕೊಟ್ಟಿದ್ದ ಭಾಗ್ಯಲಕ್ಷ್ಮಿ, ಅಂಗಡಿಗೆ ಹೋಗುವ ಅವಸರದಲ್ಲಿ ಬೀರುವಿಗೆ ಬೀಗ ಹಾಕುವುದನ್ನು ಮರೆತಿದ್ದರು. ಕೆಲ ಹೊತ್ತು ಆರೋಪಿ ಜೊತೆ ಮಾತನಾಡಿ ಬೀಳ್ಕೊಟ್ಟು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದರು.’

ADVERTISEMENT

‘ಕೆಲಸ ಮುಗಿಸಿಕೊಂಡು ರಾತ್ರಿ 9.30ರ ಸುಮಾರಿಗೆ ಭಾಗ್ಯಲಕ್ಷ್ಮಿ ಮನೆಗೆ ವಾಪಸು ಬಂದಿದ್ದಾಗ ಬೀರುವಿನಲ್ಲಿದ್ದ ಚಿನ್ನಾಭರಣ ಕಾಣಿಸಿರಲಿಲ್ಲ. ಶಶಿಕಲಾ ಮೇಲೆ ಅನುಮಾನ ವ್ಯಕ್ತಪಡಿಸಿ ಠಾಣೆಗೆ ದೂರು ನೀಡಿದ್ದರು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಸ್ನೇಹಿತೆ ಟೀ ಮಾಡಿಕೊಡಲು ಅಡುಗೆ ಮನೆಗೆ ಹೋಗಿದ್ದಾಗ ಚಿನ್ನಾಭರಣ ಕದ್ದಿರುವುದಾಗಿ ತಪ್ಪೊಪ್ಪಿಕೊಂಡಳು’ ಎಂದೂ ಡಿಸಿಪಿ ವಿವರಿಸಿದರು.

‘ಕದ್ದು ಆಭರಣವನ್ನು ಆರೋಪಿ ಪ್ರಶಾಂತ್‌ಗೆ ಕೊಟ್ಟಿದ್ದ ಶಶಿಕಲಾ, ಅದನ್ನು ಮಾರಾಟ ಮಾಡಿ ಹಣ ತಂದುಕೊಡುವಂತೆ ಹೇಳಿದ್ದಳು. ಪಾಲು ನೀಡುವುದಾಗಿ ಭರವಸೆ ನೀಡಿದ್ದಳು. ಮಾರಾಟಕ್ಕೂ ಮುನ್ನವೇ ಆರೋಪಿಗಳು ಸಿಕ್ಕಿಬಿದ್ದರು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.