ಬೆಂಗಳೂರು: ರಾಜ್ಯದ ಪರಿವರ್ತನೆಗೆ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲಗಳ ಬಲವೇ ಕಾರಣ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸುರಾನ ಸಮೂಹ ಶಿಕ್ಷಣ ಸಂಸ್ಥೆಯ ಪೀಣ್ಯ ಕ್ಯಾಂಪಸ್ನಲ್ಲಿ ಆಯೋಜಿಸಿದ್ದ ‘ಬದಲಾವಣೆಗಾಗಿ ಒಗ್ಗಟ್ಟು: ಶಿಕ್ಷಣ ಮತ್ತು ಕೈಗಾರಿಕೆ - ಸುಸ್ಥಿರ ಅಭಿವೃದ್ಧಿಗೆ ಚಾಲನೆ’ ಎಂಬ ವಿಷಯದ ಜಿಸಿಎಸ್ ಕಾನ್ಕ್ಲೇವ್ 2025ರಲ್ಲಿ ಸುರಾನ ಸಂಸ್ಥೆಯ ಜಿ.ಸಿ. ಸುರಾನ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
‘ನನಗೆ ದೊರೆತಿರುವ ಶ್ರೇಷ್ಠ ಪ್ರಶಸ್ತಿ ಎಂದರೆ ಜನರ ಪ್ರೀತಿ. ಹುಟ್ಟಿನಿಂದ ನಾನು ಕೃಷಿಕ, ಉತ್ಸಾಹದಿಂದ ರಾಜಕಾರಣಿ ಮತ್ತು ಆಯ್ಕೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಶಿಕ್ಷಣ ಎಂಬುದು ನನಗೆ ಫ್ಯಾಷನ್. ಕರ್ನಾಟಕ ಮಾನವ ಸಂಪನ್ಮೂಲಗಳ ಕೇಂದ್ರವಾಗಿದೆ. ಮೂರು ದಶಕಗಳ ಹಿಂದೆ, ಜಾಗತಿಕ ನಾಯಕರು ಇತರ ಭಾರತೀಯ ನಗರಗಳಿಗೆ ಭೇಟಿ ನೀಡಿ ಬೆಂಗಳೂರನ್ನು ಒಂದು ಆಯ್ಕೆಯಾಗಿ ಇಟ್ಟುಕೊಳ್ಳುತ್ತಿದ್ದರು. ಆದರೆ, ಇಂದು ಅದು ಬದಲಾಗಿದೆ. ಇದೀಗ ಎಲ್ಲ ಜಾಗತಿಕ ನಾಯಕರು ಮೊದಲು ಬೆಂಗಳೂರಿಗೆ ಬರುತ್ತಿದ್ದಾರೆ’ ಎಂದರು.,
ರಾಜ್ಯದಲ್ಲಿ 70 ವೈದ್ಯಕೀಯ ಕಾಲೇಜುಗಳಿವೆ. ನರ್ಸಿಂಗ್ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ನುರಿತ ಮಾನವ ಶಕ್ತಿಯನ್ನು ರೂಪಿಸುತ್ತಿದ್ದೇವೆ ಎಂದರು.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಶಿಕ್ಷಣ ಜ್ಞಾನ ನೀಡಿದರೆ, ಕೈಗಾರಿಕಾ ವಲಯ ಉದ್ಯೋಗ ನೀಡುತ್ತದೆ. ಈ ಎರಡೂ ವಲಯಗಳು ಸೂಕ್ತ ರೀತಿಯಲ್ಲಿ ಸಾಗಿದಾಗ ಬಹುದೊಡ್ಡ ಬದಲಾವಣೆ ಸಾಧ್ಯವಾಗಲಿದೆ’ ಎಂದರು.
ನಿರ್ಮಲಾನಂದನಾಥ ಸ್ವಾಮೀಜಿ ಸಮ್ಮುಖದಲ್ಲಿ ಮಂಜಮ್ಮ ಜೋಗತಿ (ಜಾನಪದ ಅಕಾಡೆಮಿ), ಕೆ. ಗಾಯತ್ರಿ ರೆಡ್ಡಿ (ಎಂಜಿಐಆರ್ಇಡಿ), ಕಮಲ್ ಸಾಗರ್ (ಪರಿಸರ), ಜವಾಹರ್ ಗೋವಿಂದರಾಜ್ (ಪೆಂಟಗನ್ ಗಾರ್ಮೆಂಟ್ಸ್), ಕಾನ್ರಾಡ್ ಅಟಾರ್ಡ್ (ಮಾಲ್ಟಾ ವಿಶ್ವವಿದ್ಯಾಲಯ), ತರುಣ್ ಮೆಹ್ತಾ (ಅಥರ್ ಎನರ್ಜಿ) ಮತ್ತು ಆದಿತ್ಯ ಸಿರೋಯಾ (ರಿಪರ್ಪಸ್ ಗ್ಲೋಬಲ್) ಅವರಿಗೆ ಜಿ.ಸಿ. ಸುರಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸೇಂಟ್ ಜಾನ್ಸ್ ರಾಷ್ಟ್ರೀಯ ಆರೋಗ್ಯ ವಿಜ್ಞಾನ ಅಕಾಡೆಮಿಯ ನಿರ್ದೇಶಕ ಫಾದರ್ ಜೇಸುದಾಸ್ ರಾಜಮಾಣಿಕ್ಕಂ, ಸುರಾನ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ಟ್ರಸ್ಟಿ ಅರ್ಚನಾ ಸುರಾನ ಮತ್ತು ಮೈಕ್ರೊ ಲ್ಯಾಬ್ಸ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ದಿಲೀಪ್ ಸುರಾನ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.