ಜನಸ್ಪಂದನಾ ಕಾರ್ಯಕ್ರಮವನ್ನು ಶಾಸಕ ಎಸ್.ಟಿ. ಸೋಮಶೇಖರ್, ಪಂಚಾಯಿತಿ ಅಧ್ಯಕ್ಷ ಡಿ. ಆನಂದಸ್ವಾಮಿ ಉದ್ಘಾಟಿಸಿದರು. ಎಸ್.ಟಿ. ಕುಬೇರಸ್ವಾಮಿ, ಚಿಕ್ಕರಾಜು, ರೇವಣಸಿದ್ದಯ್ಯ, ಬಿಂದು, ಟಿ.ಎಲ್. ಚಂದ್ರಶೇಖರ್ ಭಾಗವಹಿಸಿದ್ದರು
ರಾಜರಾಜೇಶ್ವರಿನಗರ: ‘ನಿಜವಾದ ಫಲಾನುಭವಿಗಳಿಗೆ, ಜಮೀನು ಇಲ್ಲದವರಿಗೆ ಸಾಗುವಳಿ ಚೀಟಿ, ಖಾತೆ ನೀಡಬೇಕು. ಅವರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸಬಾರದು‘ ಎಂದು ಶಾಸಕ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಮಾಗಡಿ ಮುಖ್ಯರಸ್ತೆಯ ಮಾರೇನಹಳ್ಳಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಒಂದು ಗುಂಟೆ ಜಮೀನು ಇಲ್ಲ’, ‘ಸಾಗುವಳಿ ಮಾಡುತ್ತಿರುವ ನಮಗೆ ಸಾಗುವಳಿ ಚೀಟಿ ಕೊಡಿಸಿ’, ‘ಪಹಣಿ ತಿದ್ದುಪಡಿ ಆಗುತ್ತಿಲ್ಲ’ ‘ಜಲಜೀವನ್ ಅವಾಂತರ ಉಂಟು ಮಾಡಿದೆ’ ಹೀಗೆ ವಿವಿಧ ಸಮಸ್ಯೆಗಳನ್ನು ಅನೇಕರು ಶಾಸಕರ ಮುಂದಿಟ್ಟರು.
ಚೋಳನಾಯಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಆನಂದಸ್ವಾಮಿ ಅವರು, ‘ಅನಾದಿಕಾಲದಲ್ಲಿ ನಿಗದಿಯಾಗಿರುವ ಠಾಣಾಗಡಿ ವಿಸ್ತರಿಸಲು ಸರ್ಕಾರ ಕ್ರಮಕೈಗೊಳ್ಳಬೇಕು, ಪ್ರತಿ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗವನ್ನು ಕಾಯ್ದಿರಿಸಬೇಕು’ ಎಂದು ಒತ್ತಾಯಿಸಿದರು.
ಶಾಲಾ ಮಕ್ಕಳಿಗೆ ಕ್ರೀಡಾ ಸಾಮಾಗ್ರಿ ರೈತರಿಗೆ ನೀರು ಸಿಂಪಡಣೆ ಸಾಧನ, ಕಳೆ ತೆಗೆಯುವ ಯಂತ್ರ, ಮೇವಿನ ಬೀಜ, ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್ ಎಚ್. ಶ್ರೀನಿವಾಸ್, ಒಕ್ಕಲಿಗರ ಸಂಘದ ಗೌರವ ಅಧ್ಯಕ್ಷ ಡಿ. ಹನುಮಂತಯ್ಯ, ಉಪ ತಹಶೀಲ್ದಾರ್ ಕೆಂಪೇಗೌಡ, ಬೆಂಗಳೂರು ದಕ್ಷಿಣ ತಾಲ್ಲೂಕು ಪಂಚಾಯಿತಿ ಇ.ಒ. ಬಿಂದು, ಕಾಂಗ್ರೆಸ್ ಮುಖಂಡ ಎಸ್.ಟಿ. ಕುಬೇರಸ್ವಾಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.