ಬೆಂಗಳೂರು: ಲಂಚ ಪಡೆದು ಚಿನ್ನ ಕಳ್ಳಸಾಗಣೆ ಮಾಡಲು ಪ್ರಯಾಣಿಕರಿಬ್ಬರಿಗೆ ಸಹಕರಿಸಿದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಗೊ ವಿಭಾಗದ ಹಿಂದಿನ ಕಸ್ಟಮ್ಸ್ ಸೂಪರಿಂಟೆಂಡೆಂಟ್ ಡಿ.ಅಶೋಕ್ ವಿರುದ್ಧ ಕೇಂದ್ರ ತನಿಖಾ ದಳ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಸಿಬಿಐ– ಎಸಿಬಿ) ದೂರು ನೀಡಲಾಗಿದೆ.
ಕಸ್ಟಮ್ಸ್ನ ಹೆಚ್ಚುವರಿ ಕಮಿಷನರ್ ಎಸ್. ನಸೀರ್ ಖಾನ್ ನೀಡಿರುವ ದೂರಿನಲ್ಲಿ, ಟಂಟಂ ಚಂದ್ರಶೇಖರ್ ಹಾಗೂ ವಿ.ಜೆ. ವಿಲ್ಸನ್ ಎಂಬುವರು ₹ 6.24 ಕೋಟಿ ಮೌಲ್ಯದ 20,120 ಗ್ರಾಂ ಚಿನ್ನ ಕಳ್ಳಸಾಗಣೆ ಮಾಡಲು ಅಶೋಕ್ ಸಹಕರಿಸಿದ್ದಾರೆ. ಇದಕ್ಕಾಗಿ ಪ್ರತಿ ಕೆ.ಜಿಗೆ ₹ 40ರಿಂದ ₹ 60 ಸಾವಿರದವರೆಗೆ ಲಂಚ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಅಶೋಕ್ ಅವರ ಪತ್ನಿ ಪದ್ಮ ನಾರಾಯಣ ಹಾಗೂ ಪುತ್ರಿ ನಿಧಿ ಅವರ ಯೂರೋಪ್ ಪ್ರವಾಸದ ವೆಚ್ಚ₹ 2.38 ಲಕ್ಷವನ್ನು ಈ ಇಬ್ಬರೂ ಭರಿಸಿದ್ದಾರೆ ಎಂದು ಆರೋಪಿಸಿಸಲಾಗಿದೆ.
ಅಶೋಕ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು, ಸದ್ಯ ಅವರು ಮೈಸೂರಿನಲ್ಲಿದ್ದಾರೆ. ಅವರು ಯಲಹಂಕ ವಿನಾಯಕ ನಗರದ ‘ರಾಮ ಲೇಕ್ವ್ಯೂ ಅಪಾರ್ಟ್ಮೆಂಟ್’ ನಿವಾಸಿ. ಚಂದ್ರಶೇಖರ್ ಇಂದಿರಾನಗರದ ‘ಲಾ ರಾಯಲ್ ಮ್ಯಾನರ್’ ಅಪಾರ್ಟ್ಮೆಂಟ್ ನಿವಾಸಿ. ವಿ.ಜೆ. ವಿಲ್ಸನ್ ಹೊಸ ತಿಪ್ಪಸಂದ್ರದ ಪುಟ್ಟಪ್ಪ ಬಡಾವಣೆಯವರು.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ಕ್ರಿಮಿನಲ್ ಪಿತೂರಿ, ವಂಚನೆ ಆರೋಪದಡಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.