ಬೆಂಗಳೂರು: ಕುಮಾರಕೃಪಾ ರಸ್ತೆಯಲ್ಲಿರುವ ಲಲಿತ್ ಅಶೋಕ್ ಹೋಟೆಲ್ನಲ್ಲಿ ತಂಗಿದ್ದ ಪ್ರವಾಸಿ ದಂಪತಿಯ ₹ 3 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಆಗಿರುವ ಬಗ್ಗೆ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೆಹಲಿಯ ಕುಶಾಗ್ರ ಶರ್ಮಾ ಮತ್ತು ತಾರಿಣಿ ದಂಪತಿ ಚಿನ್ನಾಭರಣ ಕಳೆದುಕೊಂಡವರು. ಅವರು ನೀಡಿದ ದೂರಿನ ಅನ್ವಯ ಹೋಟೆಲ್ನ ಸ್ವಚ್ಛತಾ ಸಿಬ್ಬಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರವಾಸಕ್ಕೆಂದು ಡಿ. 28ರಂದು ಅಹಮದಾಬಾದ್ನಿಂದ ಬಂದಿದ್ದ ದಂಪತಿ ಹೋಟೆಲ್ನಲ್ಲಿ ತಂಗಿದ್ದರು. ತಾರಿಣಿ ಅವರು ಮೈ ಮೇಲಿದ್ದ 50 ಗ್ರಾಂನ ಚಿನ್ನದ ಎರಡು ಲಾಕೆಟ್ ಮತ್ತು ರುದ್ರಾಕ್ಷಿ ಸರವನ್ನು ತೆಗೆದು ಹಾಸಿಗೆ ಬಳಿ ಇಟ್ಟು ರಾತ್ರಿ 9.30ರ ಸುಮಾರಿಗೆ ಊಟಕ್ಕೆ ತೆರಳಿದ್ದರು.
ಮರಳಿ ಬಂದು ನೋಡಿದಾಗ ಚಿನ್ನಾಭರಣ ನಾಪತ್ತೆಯಾಗಿದೆ. ಚಿನ್ನ ಕಾಣೆಯಾಗಿರುವ ಬಗ್ಗೆ ದಂಪತಿ ತಕ್ಷಣ ಹೋಟೆಲ್ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದರು. ಬಳಿಕ ಕೊಠಡಿಯಲ್ಲಿ ಹುಡುಕಾಡಿದರೂ ಚಿನ್ನಾಭರಣ ಪತ್ತೆಯಾಗಿಲ್ಲ. ಸ್ವಚ್ಛತಾ ಸಿಬ್ಬಂದಿ ಮೇಲೆ ಶಂಕೆ ವ್ಯಕ್ತಪಡಿಸಿ, ದಂಪತಿ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.