ಬೆಂಗಳೂರು: ಸರಸ್ವತೀ ಸಂಗೀತ ವಿದ್ಯಾಲಯ ನೀಡುವ ‘ಗೋವಿಂದ ಲಕ್ಷ್ಮೀ ಪುರಸ್ಕಾರ’ಕ್ಕೆ ಸಿತಾರ್ ವಾದಕ ಎನ್.ವಿ. ಗೋಪಿನಾಥ್ ಹಾಗೂ ‘ಶ್ಯಾಮಲಾ ಸ್ಮೃತಿ ಸಮ್ಮಾನ್ ಪುರಸ್ಕಾರ’ಕ್ಕೆ ಪಿಟೀಲು ವಾದಕ ಕೆ.ಸಿ. ಜಯರಾಮ್ ಅವರು ಆಯ್ಕೆಯಾಗಿದ್ದಾರೆ.
ಈ ಪುರಸ್ಕಾರಗಳು ತಲಾ ₹ 10 ಸಾವಿರ ನಗದು ಒಳಗೊಂಡಿವೆ. ವಿದ್ಯಾಲಯವು ಜೂನ್ 1ರಂದು ಸಂಜೆ 4 ಗಂಟೆ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ‘ಭಾರತೀಯ ನಾದ ಸೌರಭ’ ಸಂಗೀತೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದೆ.
ಹೋಮಿಯೋಪಥಿ ವೈದ್ಯ ಶ್ರೀಪಾದ ಹೆಗ್ಡೆ ಅವರು ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಾಗೀಶ್ ಭಟ್ ಅವರಿಂದ ಹಿಂದೂಸ್ಥಾನಿ ಗಾಯನ ನಡೆಯಲಿದೆ. ಅವರಿಗೆ ಸತೀಶ್ ಹಂಪಿಹೊಳಿ ಅವರು ತಬಲಾ ಹಾಗೂ ಶಿವಕುಮಾರ್ ಮಹಂತ್ ಅವರು ಹಾರ್ಮೋನಿಂ ಸಾಥ್ ನೀಡಲಿದ್ದಾರೆ.
ಸಿ.ಎಸ್. ಸರ್ವಮಂಗಳ ಅವರ ಸಿತಾರ್ ವಾದನಕ್ಕೆ ಎಂ.ಎಸ್. ಕಿರಣ್ ಅವರು ತಬಲಾ ಸಾಥ್ ನೀಡಲಿದ್ದಾರೆ ಎಂದು ವಿದ್ಯಾಲಯದ ಕಾರ್ಯನಿರ್ವಾಹಕ ವಾಗೀಶ್ ಭಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.