ಬೆಂಗಳೂರು: ರಾಜ್ಯ ಸರ್ಕಾರ ಅಲ್ಪಮತಕ್ಕೆ ಕುಸಿದಿರುವ ಪಕ್ಕಾ ಲೆಕ್ಕ ಹಾಗೂ ಬಹುಮತ ಸಾಬೀತುಪಡಿಸುವಂತೆ ನೀಡಿದ ಸೂಚನೆಯನ್ನು ಮುಖ್ಯಮಂತ್ರಿ ಉಲ್ಲಂಘಿಸಿರುವ ಕುರಿತು ರಾಜ್ಯಪಾಲ ವಜುಭಾಯಿ ವಾಲಾ ಅವರು, ಕೇಂದ್ರ ಗೃಹ ಸಚಿವರಿಗೆ ವರದಿ ರವಾನಿಸಿದ್ದಾರೆ.
ವರದಿಯ ಪ್ರತಿಯನ್ನು ರಾಷ್ಟ್ರಪತಿ ಭವನಕ್ಕೂ ಕಳುಹಿಸಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ರಾಜೀನಾಮೆ ನೀಡಿರುವ ಶಾಸಕರು ತಮ್ಮನ್ನು ಭೇಟಿಯಾಗಿ ತಮ್ಮ ನಿರ್ಧಾರಕ್ಕೆ ವ ಕಾರಣವನ್ನು ವಿವರಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ವಿಶ್ವಾಸಮತ ಯಾಚನೆಯ ನಿರ್ಣಯವನ್ನು ಮುಖ್ಯಮಂತ್ರಿ ಮಂಡಿಸಿ, ಅದಕ್ಕೆ ದಿನಾಂಕವನ್ನೂ ಗೊತ್ತು ಮಾಡಲಾಗಿತ್ತು.’
‘ರಾಜೀನಾಮೆಯನ್ನು ಸ್ವೀಕರಿಸಲು ಸಭಾಧ್ಯಕ್ಷರು ವಿಳಂಬ ಧೋರಣೆ ಅನುಸರಿಸುವ ಮೂಲಕ ಅಲ್ಪಮತಕ್ಕೆ ಕುಸಿದ ಸರ್ಕಾರವನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ ಎಂಬ ಸಂಶಯ ಮೂಡಿದೆ. ವಿಶ್ವಾಸಮತ ಯಾಚನೆಯ ನಿರ್ಣಯದ ದಿನ ಅದನ್ನು ಮತಕ್ಕೆ ಹಾಕದೇ ಅನಗತ್ಯವಾಗಿ ಮುಂದೂಡಲಾಗುತ್ತಿದೆ. ಎರಡು ಬಾರಿ ಗಡುವು ವಿಧಿಸಿದ ಬಳಿಕವೂ ಮುಖ್ಯಮಂತ್ರಿ ಅದನ್ನು ಉಲ್ಲಂಘಿಸಿ, ಸಾಂವಿಧಾನಿಕವಾದ ತನ್ನ ಪರಮಾಧಿಕಾರವನ್ನು ಕಡೆಗಣಿಸಿದ್ದಾರೆ. ಸಾಂವಿಧಾನಿಕ ಬಿಕ್ಕಟ್ಟಿನತ್ತ ಕರ್ನಾಟಕ ಸಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳುವ ಕಾಲ ಇದಾಗಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
‘ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸದೇ ಇದ್ದರೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುವ ಸಂಭವ ಇದೆ’ ಎಂದೂ ಅವರು ಪ್ರತಿಪಾದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.