ಬೆಂಗಳೂರು:‘ಜೆಡಿಎಸ್ನಿಂದ ನನ್ನ ಮನಸ್ಸಿಗೆ ನೋವಾಗಿರುವುದರಿಂದ ಪಕ್ಷದ ಯಾವುದೇ ಸಭೆ ಸಮಾರಂಭಗಳಲ್ಲೂ ಭಾಗವಹಿಸುತ್ತಿಲ್ಲ’ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭೇಟಿಯ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.
‘ಸದ್ಯ ಮೂರೂವರೆ ವರ್ಷ ಏನೂ ಮಾತನಾಡುವುದಿಲ್ಲ. ಬಿಜೆಪಿ ಸೇರಿ ಎಂದು ನನ್ನನ್ನು ಯಾರೂ ಕರೆದಿಲ್ಲ. ನಾನೂ ಬಿಜೆಪಿ ಸೇರುತ್ತೇನೆ ಎಂದು ಹೇಳಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಿಂತು ಹೋಗಿವೆ. ಈ ಕುರಿತು ಚರ್ಚಿಸಲು ಬಂದಿದ್ದೆ. ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಈ ಸಂಬಂಧ ಸೂಚನೆ ನೀಡಿದ್ದಾರೆ’ ಎಂದರು.
‘ನಾನು ಈಗ ಶಾಸಕನಾಗಿದ್ದೇನೆ. ಯಾವುದೇ ಪಕ್ಷ ಸೇರುವ ಉದ್ದೇಶ ಹೊಂದಿಲ್ಲ. ನನಗೆ ಕ್ಷೇತ್ರದ ಅಭಿವೃದ್ಧಿ ಬಿಟ್ಟು ಬೇರೆ ಯಾವ ಉದ್ದೇಶವೂ ಇಲ್ಲ. ಜೆಡಿಎಸ್ನಲ್ಲಿ ತಟಸ್ಥನಾಗಿದ್ದೇನೆ. ಪಕ್ಷದಲ್ಲಿ ಆಗಿರುವ ನೋವಿನಿಂದ ಹೊರಬರಲು ಸ್ವಲ್ಪ ಸಮಯಬೇಕು’ ಎಂದು ಜಿ.ಟಿ.ಡಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.