ಬೆಂಗಳೂರು: ನಕಲಿ ಗನ್ ತೋರಿಸಿ ಹಣ ಸುಲಿಗೆ ಮಾಡಿದ್ದ ಆರೋಪದಡಿ ಕೆ.ರವಿ (31) ಹಾಗೂ ರಾಜು ಅಲಿಯಾಸ್ ಅನಿಲ್ (32) ಎಂಬುವರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಸ್ಥಳೀಯ ನಿವಾಸಿಗಳಾದ ಆರೋಪಿಗಳು, ಡಿ. 2ರಂದು ಮಲ್ಲಿಕಾರ್ಜುನ್ ಎಂಬುವರ ಬಳಿಯಿದ್ದ ₹80 ಸಾವಿರ ಸುಲಿಗೆ ಮಾಡಿ ಪರಾರಿಯಾಗಿದ್ದರು. ಮಲ್ಲಿಕಾರ್ಜುನ್ ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ ₹ 60 ಸಾವಿರ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಆರೋಪಿ ರವಿ, ಸೋಲಾರ್ ಕಂಪನಿಯಲ್ಲಿ ಹಾಗೂ ಇನ್ನೊಬ್ಬ ಆರೋಪಿ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್ಡೌನ್ನಿಂದಾಗಿ ಇಬ್ಬರ ಕೆಲಸ ಹೋಗಿತ್ತು. ಕಾರು ಮಾರಾಟ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಿಕಾರ್ಜುನ್ ಬಳಿ ಹಣವಿದ್ದ ಬಗ್ಗೆ ಆರೋಪಿಗಳಿಗೆ ಗೊತ್ತಿತ್ತು. ಅದೇ ಕಾರಣಕ್ಕೆ ಸಂಚು ರೂಪಿಸಿ ಕೃತ್ಯ ಎಸಗಿದ್ದರು’ ಎಂದೂ ತಿಳಿಸಿದರು.
‘ಜಮೀನು ವ್ಯಾಜ್ಯವೊಂದರಲ್ಲಿ ಆರೋಪಿಗಳು, ಜೈಲಿಗೂ ಹೋಗಿ ಬಂದಿದ್ದರು. ಇ–ಕಾಮರ್ಸ್ ಜಾಲತಾಣವೊಂದರಲ್ಲಿ ನಕಲಿ ಗನ್ ಖರೀದಿಸಿದ್ದ ಆರೋಪಿಗಳು, ಅದನ್ನು ಬಳಸಿಕೊಂಡು ಮಲ್ಲಿಕಾರ್ಜುನ್ ಅವರನ್ನು ಬೆದರಿಸಿದ್ದರು. ಇದೇ ಆರೋಪಿಗಳು ಮತ್ತಷ್ಟು ಮಂದಿಯನ್ನೂ ಬೆದರಿಸಿ ಹಣ ಸುಲಿಗೆ ಮಾಡಿರುವ ಮಾಹಿತಿ ಇದೆ. ಆ ಬಗ್ಗೆ ತನಿಖೆ ಮುಂದುವರಿದಿದೆ’ ಎಂದೂ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.