ADVERTISEMENT

ಗೂಂಡಾ ಕಾಯ್ದೆ: ರೌಡಿ ಸಹೋದರರ ಬಂಧನಕ್ಕೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 19:32 IST
Last Updated 9 ನವೆಂಬರ್ 2022, 19:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ರೌಡಿ ಸಹೋದರರಾದ ಸಂಜಯ್ ಹಾಗೂ ಸಾಗರ್ ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದ ಪೊಲೀಸ್ ಕಮಿಷನರ್ ಅವರ ಕ್ರಮಕ್ಕೆ ನ್ಯಾಯಾಲಯದ ಸಲಹಾ ಮಂಡಳಿ ಅನುಮೋದನೆ ನೀಡಿದೆ.

‘ಕಾಮಾಕ್ಷಿಪಾಳ್ಯ 4ನೇ ಮುಖ್ಯರಸ್ತೆಯ ನಿವಾಸಿ ಸಂಜಯ್ (28) ಹಾಗೂ ತಮ್ಮ ಸಾಗರ್ ಅಲಿಯಾಸ್ ವೀರು (26), ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಜೈಲಿಗೂ ಹೋಗಿ ಜಾಮೀನು ಮೇಲೆ ಹೊರಗೆ ಬಂದಿದ್ದರು. ಅಪರಾಧ ಕೃತ್ಯಗಳನ್ನು ಮುಂದುವರಿಸಿ ಜನರನ್ನು ಬೆದರಿಸುತ್ತಿದ್ದರು’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಕೊಲೆ ಯತ್ನ, ಸುಲಿಗೆ, ಅಪಹರಣ, ಹಲ್ಲೆ, ಜೀವ ಬೆದರಿಕೆ ಪ್ರಕರಣಗಳ ಆರೋಪಿಗಳಾದ ಸಹೋದರರ ಬಗ್ಗೆ ಕಡತ ಸಿದ್ಧಪಡಿಸಿ, ಗೂಂಡಾ ಕಾಯ್ದೆಯಡಿ ಬಂಧಿಸಲು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅದನ್ನು ಪರಿಶೀಲಿಸಿದ್ದ ಕಮಿಷನರ್, ಇಬ್ಬರನ್ನೂ ಬಂಧಿಸಲು ಅನುಮತಿ ನೀಡಿ ಸೆ. 23ರಂದು ಆದೇಶ ಹೊರಡಿಸಿದ್ದರು. ಅಂದೇ ಇಬ್ಬರನ್ನೂ ಬಂಧಿಸಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.’

ADVERTISEMENT

‘ಗೂಂಡಾ ಕಾಯ್ದೆಯಡಿ ಬಂಧಿಸಿದ್ದ ಕ್ರಮದ ಬಗ್ಗೆ ಪರಿಶೀಲನೆ ನಡೆಸಿದ್ದ ನ್ಯಾಯಾಲಯದ ಸಲಹಾ ಮಂಡಳಿ, ಆದೇಶವನ್ನು ಎತ್ತಿ ಹಿಡಿದಿದೆ. ಇಬ್ಬರ ಜೈಲು ವಾಸದ ಅವಧಿಯನ್ನೂ ಮುಂದುವರಿಸಲು ಅನುಮತಿ ನೀಡಿದೆ’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.