ADVERTISEMENT

ಪರಾರಿಗೆ ಯತ್ನಿಸಿದ ಆರೋಪಿಗೆ ಗುಂಡೇಟು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 21:03 IST
Last Updated 26 ಮಾರ್ಚ್ 2020, 21:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಾನ್‌ಸ್ಟೆಬಲ್‌ ಮೇಲೆ ಸಂಜಯನಗರ ಠಾಣಾ ವ್ಯಾಪ್ತಿಯಲ್ಲಿ ಯುವಕರಿಬ್ಬರು ಬುಧವಾರ ಹಲ್ಲೆ ನಡೆಸಿದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಯುವಕನೊಬ್ಬನ ಮೇಲೆ ಪೊಲೀಸರೇ ಮೊದಲು ಹಲ್ಲೆ ನಡೆಸಿದ್ದರು ಎನ್ನಲಾಗಿದೆ.

ಈ ಮಧ್ಯೆ, ಪೊಲೀಸರ ಮೇಲೆ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳ ಪೈಕಿ ತಾಜುದ್ದೀನ್‌ನನ್ನು ಗುರುವಾರ ನಸುಕಿನಲ್ಲಿ ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸುವ ವೇಳೆ ಆತ ಪರಾರಿಯಾಗಲು ಯತ್ನಿಸಿದಾಗ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ.

ಕೊರೊನಾ ವೈರಸ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮನೆಯಿಂದ ಯಾರೂ ಹೊರಬಾರದಂತೆ ಲಾಕ್‌ಡೌನ್‌ ಘೋಷಿಸಿದ್ದರೂ, ಅಡ್ಡಾಡುತ್ತಿದ್ದವರನ್ನು ಪ್ರಶ್ನಿಸಿದಾಗ, ಪೊಲೀಸರ ಮೇಲೆ ಹಲ್ಲೆ ನಡೆದಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ತಾಜುದ್ದೀನ್‌ ಮತ್ತು ಕುತುಬುದ್ದೀನ್‌ ಎಂಬಿಬ್ಬರನ್ನು ಬಂಧಿಸಿದ್ದರು.

ADVERTISEMENT

’ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಬಂದಿದ್ದ ವೇಳೆ, ತಾಜುದ್ದೀನ್ ಪರಾರಿಯಾಗಲು ಯತ್ನಿಸಿದ. ಅಲ್ಲದೆ, ಸ್ವಲ್ಪ ದೂರ ನಿಂತು ಪೊಲೀಸ್‌ ಮೇಲೆಯೇ ಕಲ್ಲು, ಇಟ್ಟಿಗೆ ತುಂಡುಗಳನ್ನು ಎಸೆದಿದ್ದ. ಈ ವೇಳೆ ಸಬ್‌ ಇನ್‌ಸ್ಪೆಕ್ಟರ್ ರೂಪಾ ಮತ್ತು ಹೆಡ್‌ ಕಾನ್‌ಸ್ಟೆಬಲ್‌ ಮಂಜಣ್ಣ ಎಂಬುವವರು ಗಾಯಗೊಂಡಿದ್ದರು. ತಕ್ಷಣ ಸಂಜಯನಗರ ಇನ್‌ಸ್ಪೆಕ್ಟರ್ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಆರೋಪಿ ಶರಣಾಗದಿದ್ದಾಗ ಎಡಗಾಲಿಗೆ ಗುಂಡು ಹೊಡೆದಿದ್ದಾರೆ’ ಎಂದು ಉತ್ತರವಲಯ ಡಿಸಿಪಿ ಶಶಿಕುಮಾರ್‌ ತಿಳಿಸಿದರು.

ಗಾಯಗೊಂಡಿರುವ ತಾಜುದ್ದೀನ್‌, ಪಿಎಸ್‌ಐ ಮತ್ತು ಹೆಡ್‌ ಕಾನ್‌ಸ್ಟೆಬಲ್‌ ಅವರನ್ನು ಬ್ಯಾಪ್ಟಿಸ್ಟ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.